ಕೊಲೆಯಲ್ಲ ಆತ್ಮಹತ್ಯೆ ಎಂದ ಪೊಲೀಸರು
ಮಂಗಳೂರು: ಪಂಜಾಬಿನಲ್ಲಿ ಧರ್ಮಸ್ಥಳದ ಯುವತಿಯ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳದ ಏರೋನಾಟಿಕ್ಸ್ ಇಂಜಿನಿಯರ್ ಯುವತಿ ಆಕಾಂಕ್ಷಾ ನಾಯರ್ ಎಂಬವರು ಪಂಜಾಬಿನಲ್ಲಿ ನಿಗೂಢವಾಗಿ ಸಾವಿಘಿಡಾಗಿರುವುದು ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು.
ಯುವತಿ ಆಕಾಂಕ್ಷಾ ಎಸ್ ನಾಯರ್ (22) ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಂಜಾಬ್ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಧರ್ಮಸ್ಥಳದ ಬೊಳಿಯೂರು ನಿವಾಸಿಯಾಗಿರುವ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್. ನಾಯರ್ ಶನಿವಾರ ರಂದು ಪಂಜಾಬ್ನ ಪಗ್ವಾರದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಆಕಾಂಕ್ಷಾ ಅವರು ಇದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಎಂಬುವರನ್ನು ಪ್ರೀತಿಸುತ್ತಿದ್ದರು. ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾರೆ. ಆಕಾಂಕ್ಷಾ ಪ್ರಾಧ್ಯಾಪಕ ಮ್ಯಾಥ್ಯೂ ಜೊತೆ ಅವರ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಜಗಳ ಮಾಡಿದ್ದರು.
ಬಳಿಕ ಆಕಾಂಕ್ಷಾ ಕಾಲೇಜಿನಲ್ಲೂ ಬಿಜಿಲ್ ಮ್ಯಾಥ್ಯೂ ಅವರ ಜೊತೆ ಜಗಳವಾಡಿದ್ದಾರೆ. ನಂತರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಹಿನ್ನೆಲೆಯಲ್ಲಿ ಮ್ಯಾಥ್ಯೂ ವಿರುದ್ಧ ಪಂಜಾಬ್ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆ ವೇಳೆಗೆ ಧರ್ಮಸ್ಥಳ ಬೊಳಿಯೂರು ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಆಕಾಂಕ್ಷಾ 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕಾಗಿ ಜಪಾನ್ಗೆ ಹೋಗಲು ಯೋಚಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿಗೆ ತೆರಳಿ ಸರ್ಟಿಫಿಕೆಟ್ಗಳನ್ನು ತೆಗೆದುಕೊಂಡು ಬರಲು ಹೋಗಿದ್ದರು. ಸರ್ಟಿಫಿಕೆಟ್ಗಳನ್ನು ತೆಗೆದುಕೊಂಡಿರುವುದಾಗಿ ಪೋಷಕರಿಗೆ ಕರೆ ಮಾಡಿ ಆಕಾಂಕ್ಷಾ ತಿಳಿಸಿದ್ದರು. ಬಳಿಕ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದು, ಪೋಷಕರು ಇದು ಕೊಲೆಯಾಗಿಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.