ಪಾಕಿಸ್ಥಾನದ ಪರ ಗೂಢಚಾರಿಕೆ ಮಾಡುತ್ತಿದ್ದ ಯೂಟ್ಯೂಬರ್ ಸೆರೆ
ನವದೆಹಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಭಾರತದ ರಹಸ್ಯಗಳನ್ನು ರವಾನಿಸುತ್ತಿದ್ದ ಆರೋಪದಲ್ಲಿ ಸೆರೆಯಾಗಿರುವ ಹರ್ಯಾಣದ ಯೂಟ್ಯೂಬರ್ ಯುವತಿ ಜ್ಯೋತಿ ಮಲ್ಹೋತ್ರ ಕಾಶ್ಮೀರದ ಪಹಲ್ಗಾಮ್ಗೂ ಭೇಟಿ ನೀಡಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಜ್ಯೋತಿ ಇನ್ಸ್ಟಾಗ್ರಾಂನಲ್ಲಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್ಗೆ ತೆರಳಿದ್ದ ವಿಡಿಯೋ ಅಪ್ಲೋಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ವಿಡಿಯೋಗಳು ಈಗ ವೈರಲ್ ಆಗಿವೆ.
ಪಾಕಿಸ್ಥಾನದ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರು ಮಂದಿಯನ್ನು ದೇಶದ ವಿವಿಧೆಡೆಯಿಂದ ಬಂಧಿಸಲಾಗಿದ್ದು, ಈ ಪೈಕಿ ಜ್ಯೋತಿ ಮಲ್ಹೋತ್ರ ಅತ್ಯಂತ ಅಪಾಯಕಾರಿ ಯೂಟ್ಯೂಬರ್ ಆಗಿದ್ದಳು ಎಂಬ ಅಂಶ ಬಯಲಾಗಿದೆ. ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೇ 16ರಂದು ಆಕೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನೆಟ್ಟಿಗರು ಈಕೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ಥಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಜೊತೆ ಜ್ಯೋತಿ ಸಂಪರ್ಕ ಹೊಂದಿದ್ದಳು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್ನನ್ನು ಕೇಂದ್ರ ಸರ್ಕಾರ ಮೇ 13ರಂದು ಗಡೀಪಾರು ಮಾಡಿತ್ತು.
2023ರಲ್ಲಿ ಪಾಕ್ಗೆ ಹೋಗಿದ್ದ ಜ್ಯೋತಿ ಪಾಕ್ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು. ಅಲ್ಲದೇ ಪಾಕ್ ಗುಪ್ತಚರ ಏಜೆಂಟ್ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್ ಚಾನಲ್ನಲ್ಲಿ ಪಾಕಿಸ್ಥಾನ ಪರ ಇರುವ ವಿಷಯಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್ಚಾಟ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ತನ್ನ ಪಾಕಿಸ್ಥಾನಿ ಗೆಳೆಯನೊಂದಿಗೆ ಆಕೆ ವಿದೇಶ ಪ್ರವಾಸ ಮಾಡಿರುವ ದಾಖಲೆಗಳು ಕೂಡ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಆಕೆಯ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಪೇಜ್ಗಳಿಗೆ ಲಕ್ಷಗಟ್ಟಲೆ ವೀಕ್ಷಕರು ಇದ್ದರು.