ಬೆಂಗಳೂರು : ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ನ ಪ್ರಶಾಂತ್ ಲೇಔಟ್ನಲ್ಲಿ ವಿಜಯೋತ್ಸವ ನಡೆಯುತ್ತಿದ್ದಾಗ ಶುಭಾಂಶು ಶುಕ್ಲಾ(26) ಎಂಬ ಯುವಕ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ.
ಛತ್ತಿಸ್ಗಢ ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿದ್ದು, ವೈಟ್ಫೀಲ್ಡ್ನ ಪ್ರಶಾಂತ್ ಲೇಔಟ್ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದಾನೆ.
ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈಟ್ಫೀಲ್ಡ್ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದೆ, ನಂತರ ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.