ಕರ್ನಲ್‌ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹಬ್ಬಿಸಿದ ಕಿಡಿಗೇಡಿ

ಬೆಳಗಾವಿಯ ಬಾಗೇವಾಡಿಯಲ್ಲಿರುವ ಮನೆಗೆ ಪೊಲೀಸರ ಬಿಗು ಭದ್ರತೆ

ಬೆಳಗಾವಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿದ್ದ ಸೇನೆಯ ಉನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಗಂಡನ ಮನೆ ಮೇಲೆ ದಾಳಿ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸ್ಪಷ್ಟನೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಅನೀಸ್ ಉದ್ದೀನ್ ಎಂಬ ಕಿಡಿಗೇಡಿ ತನ್ನ ಎಕ್ಸ್‌ ಖಾತೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ‌ ಆರ್‌ಎಸ್‌ಎಸ್‌ ಅಟ್ಯಾಕ್ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾನೆ. ಕರ್ನಲ್ ಸೋಫಿಯಾ ಅವರ ಫೋಟೊ ಜೊತೆಗೆ ಮನೆಯೊಂದು ಧ್ವಂಸವಾಗಿರುವ ಯಾವುದೋ ಹಳೆ ಪೋಟೊ ಬಳಸಿಕೊಂಡು ಪೋಸ್ಟ್ ಮಾಡಿದ್ದ. ದಾಳಿಕೋರರಿಂದ ತಪ್ಪಿಸಿಕೊಳ್ಳಲು ಖುರೇಷಿ ಕುಟುಂಬವನ್ನು ದಿಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಬರೆದುಕೊಂಡಿದ್ದ. ದ್ವೇಷಪೂರಿತವಾಗಿದ್ದ ಈ ಪೋಸ್ಟ್ ಸಾಕಷ್ಟು ವೈರಲ್‌ ಆಗಿತ್ತು.

















































 
 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಮನೆ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸುರಕ್ಷತಾ ಕ್ರಮವಾಗಿ ಸೋಫಿಯಾ ಅವರ ಮನೆಗೆ ಗೋಕಾಕ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ‌ಸಾರ್ವಜನಿಕರು ಅನಗತ್ಯವಾಗಿ ಕುಟುಂಬವನ್ನು ಭೇಟಿಯಾಗದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅನೀಸ್ ಉದ್ದೀನ್ ಸುಳ್ಳು ಸುದ್ದಿ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಪೊಲೀಸರು ಅನೀಸ್ ಉದ್ದೀನ್ ಪತ್ತೆಗೆ ಬಲೆ ಬೀಸಿದ್ದಾರೆ.

ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ದ್ವೇಷಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಕಾನೂನು ಬಾಹಿರ. ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಭೀಮಾಶಂಕರ ಗುಳೇದ್ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top