ಯುದ್ಧಕ್ಕೆ ಮೋದಿಯೇ ಕಾರಣ ಎಂಬ ವೀಡಿಯೊ ಅಪ್ಲೋಡ್ ಮಾಡಿದ್ದ ಯುವಕ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಬಾಂಬ್ ಹಾಕಬೇಕೆಂದು ಪ್ರಚೋದನಾಕಾರಿ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ಯುವಕನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಆರೋಪಿ ನವಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.
ಭಾರತ ಮತ್ತು ಪಾಕಿಸ್ಥಾನ ಮಧ್ಯೆ ಯುದ್ಧವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ಥಾನ ಬಾಂಬ್ ಹಾಕಿಲ್ಲ? ಜನರೆಲ್ಲ ಸುಮ್ಮನೆ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು ಮೋದಿ. ಮೊದಲು ಮೋದಿ ಮನೆ ಮೇಲೆ ಬಾಂಬ್ ಹಾಕಬೇಕು ಎಂದು ವೀಡಿಯೊದಲ್ಲಿ ನವಾಜ್ ಹೇಳಿಕೊಂಡಿದ್ದಾನೆ.
ಪಬ್ಲಿಕ್ ಸರ್ವೆಂಟ್ ಐಡಿಯಲ್ಲಿ ನವಾಜ್ ವಿಡಿಯೋ ವೈರಲ್ ಮಾಡಿದ್ದ. ಇದನ್ನು ಆಧರಿಸಿ ಬಂಡೆಪಾಳ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಪಾಕಿಸ್ಥಾನದ ಪರ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದರು. ಇದೀಗ ಬೆಂಗಳೂರಿನಲ್ಲಿ ಮೋದಿ ವಿರುದ್ಧ ಪ್ರಚೋದನಕಾರಿ ವೀಡಿಯೊ ವೈರಲ್ ಆಗಿದೆ.