ಗಡಿ ಭಾಗದಲ್ಲಿ ನಿನ್ನೆ ರಾತ್ರಿ ಭಾರಿ ಸಮರ
ಡ್ರೋನ್, ಕ್ಷಿಪಣಿ ದಾಳಿ ಮಾಡಿದ ಪಾಕ್
ನವದೆಹಲಿ: ಪಾಕಿಸ್ಥಾನದ ಮೂರು ಪ್ರಮುಖ ವಾಯುನೆಲೆಗಳಿಗೆ ಭಾರತ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಳಿ ಮಾಡಿ ಭಾರಿ ಹಾನಿ ಉಂಟು ಮಾಡಿದೆ. ರಾವಲ್ಪಿಂಡಿಯ ನೂರ್ಖಾನ್, ಚಕ್ವಾಲ್ನ ಮುರಿಡ್ ಮತ್ತು ಶೋರ್ಕೋಟ್ನ ರಫೀಕಿ ವಾಯುನೆಲೆಗಳ ಮೇಲೆ ಕ್ಷಿಪಣಿ ಹಾರಿಸಲಾಗಿದ್ದು, ಪಾಕಿಸ್ಥಾನದ ಅಪಾರ ಶಸ್ತ್ರಾಸ್ತ್ರಗಳು ಮತ್ತು ಸ್ವತ್ತುಗಳು ನಾಶವಾಗಿವೆ.
ಈ ದಾಳಿಯಿಂದ ಭಾರತ ಮತ್ತು ಪಾಕಿಸ್ಥಾನ ನಡುವಿನ ಯುದ್ಧ ಇನ್ನಷ್ಟು ತೀವ್ರಗೊಂಡಿದೆ. ಈ ದಾಳಿಯ ಬಳಿಕ ಪಾಕಿಸ್ಥಾನ ತನ್ನ ವಾಯುಮಾರ್ಗಗಳನ್ನು ಪೂರ್ಣವಾಗಿ ಮುಚ್ಚಿದೆ ಎಂದು ವರದಿಯಾಗಿದೆ.
ನಿನ್ನೆ ಕತ್ತಲು ಕವಿಯುತ್ತಿದ್ದಂತೆಯೇ ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಗಡಿ ಪ್ರದೇಶಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ನಿನ್ನೆ ಬೆಳಗ್ಗೆಯಿಂದ ಯಾವುದೇ ಡ್ರೋನ್ ದಾಳಿಗಳು ಆಗಿರಲಿಲ್ಲ. ಬದಲಿಗೆ ಪಾಕ್ ಆಗಾಗ ಬಾರ್ಡರ್ನಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತ ಸಹ ತಿರುಗೇಟು ನೀಡಿತ್ತು. ಆದರೆ ರಾತ್ರಿಯಾಗುತ್ತಿದ್ದಂತೆಯೇ ಪಾಕಿಸ್ಥಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಪಾಕ್ ದಾಳಿ ನಡೆಸುತ್ತಿದ್ದಂತೆಯೇ ಜಮ್ಮು-ಕಾಶ್ಮೀರದಲ್ಲಿ ಸೈರನ್ ಮೊಳಗಿದೆ. ಕೂಡಲೇ ಅಲರ್ಟ್ ಆದ ಭಾರತೀಯ ಸೇನೆ ಪಾಕ್ನ ಡ್ರೋನ್ಗಳನ್ನು ಆಗಸದಲ್ಲೇ ಹೊಡೆದುರುಳಿಸಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.
ಜಮ್ಮು-ಕಾಶ್ಮೀರದ ಅವಂತಿಪುರದಲ್ಲೂ ಡ್ರೋನ್ ದಾಳಿಗೆ ಯತ್ನಿಸಿದೆ. ಅವಂತಿಪುರದ ಏರ್ಬೇಸ್ ಗುರಿಯಾಗಿಸಿ ಹಾರಿಸಿದ್ದ ಡ್ರೋನ್ ಅನ್ನು ಧ್ವಂಸ ಮಾಡಲಾಗಿದೆ. ರಾಜಸ್ಥಾನ, ಪಂಜಾಬ್ ಸೇರಿದಂತೆ ಗಡಿ ರಾಜ್ಯಗಳಲ್ಲಿ ಪಾಕ್ ಡ್ರೋನ್ ದಾಳಿಯನ್ನು ಭಾರತ ಸೇನೆ ವಿಫಲಗೊಳಿಸಿದೆ.
ಜಮ್ಮುವಿನಲ್ಲಿ ಮಿಸೈಲ್ ಅಟ್ಯಾಕ್ಗೆ ಪಾಕಿಸ್ಥಾನ ಯತ್ನಿಸಿದ್ದು, ಭಾರತ ಏರ್ ಡಿಫೆನ್ಸ್ ಸಿಸ್ಟಮ್ ಪಾಕ್ ಮಿಸೈಲ್ ಕ್ಷಿಪಣಿಯನ್ನು ಹೊಡೆದುರುಳಿಸಿದೆ. ರಾಜಸ್ಥಾನದ ಜೈಸಲ್ಮೇರ್, ಜಮ್ಮುವಿನ ಪಠಾಣ್ಕೋಟ್, ಪಂಜಾಬ್ನ ಫಿರೋಜ್ಪುರ್ನಲ್ಲೂ ಬ್ಲಾಕ್ಔಟ್ ಘೋಷಣೆ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಜಮ್ಮುವಿನಲ್ಲಿ ಎಲ್ಲ ರೈಲುಗಳ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ರೈಲುಗಳಲ್ಲಿರುವ ಪ್ರಯಾಣಿಕರು ತಮ್ಮ ಮೊಬೈಲ್ ಲೈಟ್ ಬಳಸದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ಥಾನ ದಾಳಿ ಆರಂಭಿಸಿದ ಬಳಿಕ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಯಾರೂ ಮನೆಯಿಂದ ಆಚೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ. ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಒಮರ್ ಅಬ್ದುಲ್ಲಾ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಬಾರ್ಮರ್ ನಗರದಲ್ಲಿ ಹೈ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಪೂರ್ಣ ಬ್ಲ್ಯಾಕೌಟ್ ಪಾಲಿಸಿ. ಯಾವುದೇ ರೀತಿಯ ಬೆಳಕನ್ನು ಬಳಸಬೇಡಿ. ವಾಹನದೊಂದಿಗೆ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪಂಜಾಬ್ನ ಫಿರೋಜ್ಪುರ್ನಲ್ಲಿ ನಿನ್ನೆ ರಾತ್ರಿ ಮನೆಗೆ ಪಾಕಿಸ್ಥಾನದ ಡ್ರೋನ್ ಅಪ್ಪಳಿಸಿದ ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.