ಅಗತ್ಯ ವಸ್ತುಗಳ ಕೊರತೆ ಕಿಡಿಗೇಡಿಗಳು ಹಬ್ಬಿಸಿದ ವದಂತಿ ಎಂದು ಪ್ರಹ್ಲಾದ ಜೋಶಿ ಸ್ಪಷ್ಟನೆ
ನವದೆಹಲಿ : ಯುದ್ಧ ಶುರುವಾಗಿದ್ದರೂ ದೇಶದಲ್ಲಿ ಆಹಾರ ಧಾನ್ಯ ಕೊರತೆಯಾಗುವುದಿಲ್ಲ. ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಿದ್ದು, ಜನರು ಧಾವಂತದಲ್ಲಿ ಖರೀದಿ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಯುದ್ಧದಿಂದಾಗಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಿದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಉದ್ಭವಿಸಿಲ್ಲ. ದೇಶದಲ್ಲಿ ಧಾರಾಳ ಆಹಾರ ಮತ್ತು ಅಗತ್ಯ ವಸ್ತುಗಳ ಸಂಗ್ರಹ ಇದೆ. ಕೊರತೆ ಉಂಟಾಗಿದೆ ಎಂಬುದು ಶುದ್ಧ ಸುಳ್ಳು. ಯಾರೊಬ್ಬರೂ ಈ ವದಂತಿಗೆ ಕಿವಿಗೊಡಬಾರದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ದೇಶದ ವಿವಿಧೆಡೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಕೆಲವರು ಸುಳ್ಳು ವದಂತಿಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನು ದಿಕ್ಕುತಪ್ಪಿಸುವ ಕಿಡಿಗೇಡಿಗಳ ಪ್ರಯತ್ನ ಇದಾಗಿದೆ. ಪಂಜಾಬ್ನಲ್ಲಿ ಇಂಥ ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದರೆ ದೇಶದ ಯಾವುದೇ ಸ್ಥಳದಲ್ಲೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚೇ ದಾಸ್ತಾನಿದೆ. ಜನರು ಅಗತ್ಯ ಆಹಾರ ಧಾನ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳಿಗೆ ಎಲ್ಲೂ ಮುಗಿಬೀಳಬೇಕಿಲ್ಲ ಎಂದು ಹೇಳಿದ್ದಾರೆ.
ದೇಶಾದ್ಯಂತ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಎಲ್ಲೆಡೆ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲೇ ಆಹಾರ ಧಾನ್ಯ ಮತ್ತು ಅಗತ್ಯ ಸಾಮಾನು ಸರಂಜಾಮು ಇರುವುದು ದೃಢಪಟ್ಟಿದೆ. ದೇಶದಲ್ಲಿ ಸಾಕಷ್ಟು ಸಂಗ್ರಹವಿದೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ದೇಶದಲ್ಲಿ ಅಕ್ಕಿ, ಗೋಧಿ, ಕಡಲೆ, ತೊಗರಿ, ಮಸೂರ್, ಹೆಸರುಕಾಳು ಹೀಗೆ ಎಲ್ಲ ಆಹಾರ-ಧಾನ್ಯ, ಬೇಳೆ-ಕಾಳುಗಳು ಅಗತ್ಯಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಸಂಗ್ರಹವಿದೆ. ಆಹಾರ ಪದಾರ್ಥ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿದೆ ಎಂಬ ವದಂತಿ ನಿರಾಧಾರವಾಗಿದ್ದು, ಯಾರೂ ಇದನ್ನು ನಂಬಬಾರದು. ಜನತೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ. ಸುಳ್ಳು ವದಂತಿಗೆ ಕಿವಿಗೊಟ್ಟು ಯಾರೊಬ್ಬರೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಖರೀದಿಗೆ ತರಾತುರಿ ತೋರಬಾರದು. ಬೇರೆ ಬೇರೆ ಮಾರುಕಟ್ಟೆಗಳಿಗೆ ತೆರಳಿ ದುಪ್ಪಟ್ಟು ಹಣ ತೆತ್ತು ಖರೀದಿಯಲ್ಲಿ ತೊಡಗಿಕೊಳ್ಳುವ ಅವಶ್ಯವಿಲ್ಲ ಎಂದು ಹೇಳಿದ್ದಾರೆ.