ಕಟ್ಟೆಚ್ಚರದಿಂದಿರಲು ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗಿರುವ ಹಿನ್ನೆಲೆಯಲ್ಲಿ ಭಾರತ ತನ್ನ 24 ವಿಮಾನ ನಿಲ್ದಾಣಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿದೆ.
ಪಾಕಿಸ್ತಾನ ವಿಮಾನ ನಿಲ್ದಾಣಗಳನ್ನು ಗುರಿ ಮಾಡಿಕೊಂಡು ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತದ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಉಳಿದ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ ರವಾನಿಸಿದೆ.
ಗುರುವಾರ ಪಾಕಿಸ್ಥಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸುತ್ತಿದ್ದಂತೆಯೇ ಭಾರತ ಕೂಡ ಲಾಹೋರ್, ಇಸ್ಲಾಮಾಬಾದ್ ಮೇಲೆ ದಾಳಿ ಆರಂಭಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್ನಲ್ಲಿ ಪಾಕ್ ಆರ್ಮಿ ಜಮ್ಮು, ಪಂಜಾಬ್ ಹಾಗೂ ರಾಜಸ್ಥಾನದ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್ ಮಾಡಿದೆ. ಭಾರತದ ಏರ್ ಡಿಫೆನ್ಸ್ ಯೂನಿಟ್ನಿಂದ ಪಾಕ್ನ ಎಲ್ಲ ಕ್ಷಿಪಣಿಗಳನ್ನು ನಾಶ ಮಾಡಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಯಾವೆಲ್ಲ ಏರ್ಪೋರ್ಟ್ಗಳು ಬಂದ್?
ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂಟರ್, ಕಿಶನ್ಗಢ, ಪಟಿಯಾಲ, ಶಿಮ್ಲಾ, ಕಾಂಗ್ರಾ-ಗಗ್ಗಲ್, ಭಟಿಂಡಾ, ಜೈಸಲ್ಮೇರ್, ಜೋಧಪುರ, ಬಿಕಾನೆರ್, ಹಲ್ವಾರಾ, ಪಠಾಣ್ಕೋಟ್, ಜಮ್ಮು, ಲೆಹ್, ಮುಂದ್ರಾ, ಜಾಮ್ನಗರ್, ಹಿರಾಸರ್ (ರಾಜ್ಕೋಟ್), ಪೋರ್ಬಂದರ್, ಕೆಶೋಡ್, ಕಾಂಡ್ಲಾ, ಭುಜ್ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ಸದ್ಯಕ್ಕೆ ಪಾಕಿಸ್ಥಾನ ಗಡಿ ಭಾಗದಲ್ಲಿರುವ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದೆ. ಆದರೆ ಎರಡೂ ದೇಶಗಳಲ್ಲಿ ಬಲಿಷ್ಠ ಕ್ಷಿಪಣಿಗಳಿರುವುದರಿಂದ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಕಟ್ಟೆಚ್ಚರದಿಂದಿರಲು ಸೂಚಿಸಲಾಗಿದೆ.