ಬಂಕರ್ನಲ್ಲಿ ಅಡಗಿ ಕುಳಿತ ಪಾಕ್ ಪ್ರಧಾನಿ
ನವದೆಹಲಿ: ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವುದರಿಂದ ಪಾಕಿಸ್ಥಾನದ ಜನತೆ ತತ್ತರಿಸಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ಥಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ. ಜಮ್ಮುವಿನ ಮೇಲೆ ಪಾಕ್ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್ ಅಟ್ಯಾಕ್ ಮಾಡಿರುವ ಭಾರತ ಲಾಹೋರ್ ಮೇಲೆ ಮಿಸೈಲ್ಗಳ ಸುರಿಮಳೆಗರೆದಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ಥಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ಥಾನ ಡ್ರೋನ್ ದಾಳಿ ನಡೆಸಿತ್ತು. ಆವಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲೂಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೆ ದಾಳಿಗೆ ಸಂಚುಮಾಡಿತ್ತು. ಭಾರತೀಯ ಸೇನೆ ಎಲ್ಲಾ ದಾಳಿಯನ್ನ ವಿಫಲಗೊಳಿಸಿದೆ.
ಲೈನ್ ಆಫ್ ಕಂಟ್ರೋಲ್ ಬಳಿ ಉದ್ವಿಗ್ನತೆ ಹೆಚ್ಚಾಗಿದೆ, ಜಮ್ಮುವಿನ ಪೂಂಛ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದು, ಜನರು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಲೈಟ್ ಆಫ್ ಮಾಡಿ, ಕಿಟಕಿಗಳಿಗೆ ಪರದೆ ಹಾಕಿ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಭಯಪಡಬೇಡಿ. ಸೈರನ್ ಮೊಳಗುತ್ತದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಸಂದೇಶ ರವಾನಿಸುತ್ತೇವೆ. ನಮ್ಮ ಸೈನಿಕರು ಕಾರ್ಯಪ್ರವೃತ್ತರಾಗಿದ್ದಾರೆ. ನಾವೆಲ್ಲರೂ ಮನೆಯಲ್ಲಿಯೇ ಇದ್ದು ಅವರಿಗೆ ಬೆಂಬಲ ನೀಡಬೇಕು. ಭಯಪಡುವ ಅಗತ್ಯವಿಲ್ಲ ಸೇನೆ ಹೇಳಿದೆ.
ಬಂಕರ್ನಲ್ಲಿ ಅಡಗಿದ ಪಾಕ್ ಪ್ರಧಾನಿ
ಭಾರತ ಹಾರಿಸಿದ ಕ್ಷಿಪಣಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸದ ಸಮೀಪದಲ್ಲೇ ಸ್ಫೋಟಿಸಿದ್ದು, ಪ್ರಾಣಭಯದಲ್ಲಿ ಅವರು ಬಂಕರ್ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರದಲ್ಲೇ ಭಾರಿ ಸ್ಫೋಟದ ಸದ್ದಾಗಿದೆ. ಇದರಿಂದ ಪಾಕ್ ಪ್ರಧಾನಿ ಬೆಚ್ಚಿದ್ದಾರೆ. ಪಾಕಿಸ್ಥಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಮುಳುಗಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಇದರ ನಡುವೆಯೇ ಪಾಕಿಸ್ಥಾನದ ಪೈಲಟ್ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಭಾರತೀಯ ರಕ್ಷಣಾ ಪಡೆಗಳ ದಿಟ್ಟ ಉತ್ತರಕ್ಕೆ ಕಕ್ಕಾಬಿಕ್ಕಿಯಾಗಿರುವ ಪಾಕಿಸ್ತಾನದ ಸಿಂಧ್, ಪಂಜಾಬ್ ಕಂಟೋನ್ಮೆಂಟ್ಗಳಲ್ಲಿ ಭೀತಿ ಹೆಚ್ಚಾಗಿದೆ. ಮಿಲಿಟರಿ ಕಂಟೋನ್ಮೆಂಟ್ಗಳನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡುತ್ತಿದೆ.