ಪುತ್ತೂರು: ಇಲ್ಲಿಯ ಕಿಲ್ಲೇ ಮೈದಾನ ರಸ್ತೆಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ಮೇ 11 ರಂದು ಬೆಳಿಗ್ಗೆ 8.26 ರ ಶುಭಮುಹೂರ್ತದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ದೇವಸ್ಥಾನದಲ್ಲಿ ಅರಾಧ್ಯ ದೇವಿಯಾದ ಹತ್ತೂರಿಗೆ ಸಂಬಂಧಪಟ್ಟ ಪದ್ಮಾವತಿ ಎಂಬ ಖ್ಯಾತಿಯ ಪನ್ನಗ ಕನ್ನಿಕಾದೇವಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಿಕೊಂಡು ಬಂದಿದ್ದರು. ಬಳಿಕ ದಿನಗಳಲ್ಲಿ ದೇವಸ್ಥಾನ ಶಿಥಿಲಾವಸ್ಥೆಗೆ ಜಾರಿತ್ತು. ಆದಾದ ಬಳಿಕ ಸ್ಥಳೀಯ ರಾಧಾಬಾಯಿ ಮತ್ತು ಅವರ ಮಕ್ಕಳು ಕಿರೀಟ ಇಟ್ಟು ಶ್ರೀ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಇದು ಶ್ರೀ ಮಹಾಕಾಳಿ ದೇವರು ಎಂದು ಕಂಡು ಬಂದಿದ್ದು, ಜೀರ್ಣೋದ್ಧಾರದ ನಿಟ್ಟಿನಲ್ಲಿ ಇದೀಗ ಈ ಸನ್ನಿಧಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಸಮಸ್ತ ಪ್ರಾಯಶ್ಚಿತಗಳನ್ನು ಮಾಡಿ ಈ ಸ್ಥಳದ ಜೀರ್ಣೋದ್ಧಾರಕ್ಕಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಿದಂತೆ ಅರಂಭಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮೇ 10 ಶನಿವಾರ ಬೆಳಿಗ್ಗೆ 9 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ನಿಧಿಕುಂಭ ಮೆರವಣಿಗೆ ಆರಂಭಗೊಂಡು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಎದುರಿನಿಂದ ಸಾಗಿ ಕಿಲ್ಲೇ ಮೈದಾನ ರಸ್ತೆ ಪ್ರವೇಶಿಸಿ ಶ್ರೀ ಮಹಾಕಾಳಿ ದೇವಿಯ ಸಾನಿಧ್ಯವನ್ನು ತಲುಪಲಿದೆ. ಮೇ.11 ಭಾನುವಾರ ಬೆಳಿಗ್ಗೆ 8.26 ರ ಶುಭ ಮುಹೂರ್ತದಲ್ಲಿ ಷಡಧಾರ ಮತ್ತು ನಿಧಿಕುಂಭ ಪ್ರತಿಷ್ಠೆ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟದಂತೆ ಕಾಣಿಕೆ ನೀಡಬೇಕಾಗಿ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಕಾಮತ್, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಖಜಾಂಚಿ ನಿತಿನ್ ಮಂಗಳ ಉಪಸ್ಥಿತರಿದ್ದರು.