ಗ್ರಾಮದೇವತೆಯ ಜಾತ್ರೆ ಮೆರವಣಿಗೆ ವೇಳೆ ವದಂತಿಗಳಿಂದ ನೂಕುನುಗ್ಗಲು ಉಂಟಾಗಿ ದುರಂತ
ಪಣಜಿ: ಉತ್ತರ ಗೋವಾದ ಶಿರಗಾವ್ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 7 ಜನರು ದುರ್ಮರಣ ಹೊಂದಿದ್ದು, 50ಕ್ಕೂ ಅಧಿಕ ಜನರಿಗೆ ಗಾಯಂಡಿದ್ದಾರೆ. ಘಟನೆ ಕುರಿತು ಸಿಎಂ ಪ್ರಮೋದ್ ಸಾವಂತ್ ಆಘಾತ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೋವಾದ ಶಿರ್ಗಾಂವ್ ಗ್ರಾಮದಲ್ಲಿ ದೇವಿ ಲೈರೈ ಜಾತ್ರೆಯಲ್ಲಿ ಶನಿವಾರ ಮುಂಜಾನೆ ಈ ಘಟನೆ ಸಂಭವಿಸಿದೆ. ಲೈರೈ ದೇವಿ ಜಾತ್ರೆ ಮೆರವಣಿಗೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ದೊಡ್ಡ ಧಾರ್ಮಿಕ ಸಭೆಯ ಸಮಯದಲ್ಲಿ ಭಕ್ತರಲ್ಲಿ ಭೀತಿ ಹರಡಿ, ಹಠಾತ್ ನೂಕುನುಗ್ಗಲು ಉಂಟಾದಾಗ ಈ ಘಟನೆ ಸಂಭವಿಸಿದೆ. ತುರ್ತು ಸೇವೆಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಕಾಲ್ತುಳಿತಕ್ಕೆ ನಿಖರವಾದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಆದರೆ, ಪ್ರಾಥಮಿಕ ವರದಿಗಳು ಜನದಟ್ಟಣೆ ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳ ಕೊರತೆಯಿಂದಾಗಿ ಇದು ಸಂಭವಿಸಿದೆ ಎಂದು ಸೂಚಿಸಿವೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.