ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಯುವಕರು
ಉಡುಪಿ: ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆದ ಬೆನ್ನಲ್ಲೇ ಉಡುಪಿ ಸಮೀಪ ಆತ್ರಾಡಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಅಬೂಬಕ್ಕರ್ ಹಲ್ಲೆಗೊಳಗಾದ ಮುಸ್ಲಿಂ ಯುವಕ. ಹಿರಿಯಡಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಮದು ಪೊಲೀಸರು ತಿಳಿಸಿದ್ದಾರೆ.
ಸುಶಾಂತ್ ಮತ್ತು ಸಂದೇಶ್ ಪೂಜಾರಿ ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಆಟೋರಿಕ್ಷಾ ಚಾಲಕ ಅಬೂಬಕ್ಕರ್ನನ್ನು ಅಡ್ಡಕಟ್ಟಿದ್ದ ಸುಶಾಂತ್ ಮತ್ತು ಸಂದೇಶ್ ಪೂಜಾರಿ ತಲ್ವಾರ್, ಬಾಟಲ್ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ದಾಳಿಯಿಂದ ಅಬೂಬ್ಬಕ್ಕರ್ ತಪ್ಪಿಸಿಕೊಂಡು ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ಹಿರಿಯಡಕ ಠಾಣೆ ಪೊಲೀಸರು ಸುಶಾಂತ್ ಮತ್ತು ಸಂದೇಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆಗೆ ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಹಲ್ಲೆ ನಡೆದಿದ್ದು, ಮುಂಜಾನೆ 3 ಗಂಟೆಗೆ ಐವರು ದುಷ್ಕರ್ಮಿಗಳಿಂದ ಯುವಕ ಮೇಲೆ ದಾಳಿ ಮಾಡಿ ಚಾಕು ಇರಿಯಲಾಗಿದೆ. ಇರ್ಶಾದ್ ಚಾಕು ಇರಿತಕ್ಕೊಳಗಾದ ಯುವಕ. ಇರ್ಶಾದ್ ಮಂಗಳೂರು ಮಾರುಕಟ್ಟೆಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಐವರು ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಈ ವೇಳೆ ಮನೆಯೊಂದಕ್ಕೆ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾನೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರ್ಶಾದ್ಗೆ ಚಿಕಿತ್ಸೆ ನೀಡಲಾಗಿದೆ.