ಕಾರ್ಕಳ : ಮಂಗಳೂರಿನಲ್ಲಿ ವಾಸವಿದ್ದ ಮೂಲತಃ ಕಾರ್ಕಳದವರಾದ ಉದ್ಯಮಿ ದಿಲೀಪ್ ಎನ್.ಆರ್. ಎಂಬವರು ಮಂಗಳವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದರು.ವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ.

ಮಂಗಳೂರಿನಲ್ಲಿ ವಾಸವಿದ್ದ ದಿಲೀಪ್ ಎನ್.ಆರ್. ಅವರು ನಿನ್ನೆ ರಾತ್ರಿ ಅಲ್ಲಿಂದ ತನ್ನ ಕ್ವಿಡ್ ಕಾರಿನಲ್ಲಿ ಹೊರಟವರು ನಿಟ್ಟೆ ದೂಪಕಟ್ಟೆಯ ಬಳಿ ನವೋದಯ ಪ್ರಾಪರ್ಟಿಸ್ ಮುಂಭಾಗ ರಸ್ತೆ ಬದಿ ಕಾರು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಒಳಗೆ ವಿಷದ ಬಾಟಲಿ ಕಂಡುಬಂದಿದ್ದು, ಹೀಗಾಗಿ ವಿಷ ಸೇವಿಸಿದ ಬಳಿಕ ಗುಂಡು ಹಾರಿಸಿಕೊಂಡಿರಬೇಕು ಎನ್ನಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು, ಇನ್ನಷ್ಟೇ ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ. ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ದಿಲೀಪ್ ಮೂಲತಃ ಕಾರ್ಕಳ ತೆಳ್ಳಾರು ರಸ್ತೆ ನಿವಾಸಿಯಾಗಿದ್ದು, ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಂಗಳೂರು, ಮುಂಬಯಿ ಹಾಗೂ ಹೈದರಾಬಾದ್ನಲ್ಲಿ ಹೋಟೆಲ್ ಉದ್ಯಮ ನಡೆಸಿದ್ದರು. ಉದ್ಯಮದಲ್ಲಿ ನಷ್ಟವನ್ನು ಕೂಡ ಅನುಭವಿಸಿದ್ದು ಇದರ ಜೊತೆಗೆ ಕಾಯಿಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ತುಂಬಾ ನೊಂದಿದ್ದರು ಎನ್ನಲಾಗಿದೆ. ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಸುಭೀತ್ ಎನ್.ಆರ್ ಅವರ ಸಹೋದರನಾಗಿರುವ ದಿಲೀಪ್ ಎನ್.ಆರ್. ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರಿಗೂ ಸಂಬಂಧಿ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ತನ್ನ ಸ್ನೇಹಿತರಿಗೆ ಹಾಗೂ ಆಪ್ತರಿಗೆ ವಾಟ್ಸಪ್ನಲ್ಲಿ ನಾನು ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ ಎಂದು ಮೇಸೇಜ್ ಕಳುಹಿಸಿದ್ದರು. ಕಾರ್ಕಳ ಮೂಲದ ಮುಂಬೈಯ ಉದ್ಯಮಿಯೊಬ್ಬರು ಮೇಸೆಜ್ ನೋಡಿ ಮೃತರ ಅಣ್ಣನಿಗೆ ವಿಷಯ ತಿಳಿಸಿದಾಗ, ದಿಲೀಪ್ರನ್ನು ಸಂಪರ್ಕಿಸಲು ಪ್ರಯತ್ನಪಟ್ಟಾಗ ಯಾವುದೇ ಸುಳಿವು ಸಿಗಲಿಲ್ಲ. ಪೋಲಿಸರ ಸಹಾಯದಿಂದ ಹುಡುಕಾಟ ಪ್ರಾರಂಭಿಸಿ ಮೊಬೈಲ್ ನಂಬರ್ ಲೊಕೇಶನ್ ಆಧಾರದಲ್ಲಿ ಹುಡುಕಾಡಿದಾಗ ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಕಾರು ಪತ್ತೆಯಾಗಿದೆ. ಕಾರನ್ನು ಪರಿಶೀಲಿಸಿದಾಗ ದಿಲೀಪ್ ರಿವಾಲ್ವರ್ನಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ದಿಲೀಪ್ ಸಮಾಜ ಸೇವೆಯಲ್ಲಿಯೂ ತೊಡಗಿಸುವ ಮೂಲಕ ಕಾರ್ಕಳ ಪುರಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಿ ಪುರಸಭೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಸಾಧು ಶೆಟ್ಟಿಯವರ ತುಳುನಾಡ ಸೇನೆ ಸಂಘಟನೆಯಲ್ಲಿಯೂ ಮುಂಚೂಣಿಯಲ್ಲಿದ್ದರು.