ಹಿಂದು ಕಾರ್ಯಕರ್ತರು ಹಲ್ಲೆ ಮಾಡಿದ ಕುರಿತು ಪ್ರತಿದೂರು ದಾಖಲು
ಬೆಳ್ತಂಗಡಿ: ಖಾಸಗಿ ಕಾಲೇಜು ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದ ವಾಲಿಬಾಲ್ ಕೋಚ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ. ಕಾರ್ಕಳದ ಸಯ್ಯದ್ (24) ಎಂಬಾತ ಕಿರುಕುಳ ನೀಡಿದ ಆರೋಪಿ.
17ರ ಹರೆಯದ ವಿದ್ಯಾರ್ಥಿನಿಗೆ ಸಯ್ಯದ್ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮೆಸೇಜ್ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಏ.26ರಂದು ಉಜಿರೆಯಲ್ಲಿ ಸಯ್ಯದ್ನನ್ನು ಹಿಡಿದು ಥಳಿಸಿದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ವಿದ್ಯಾರ್ಥಿನಿಯ ದೂರಿನಂತೆ ಸಯ್ಯದ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಸಯ್ಯದ್ ಉಜಿರೆಯ ಕಾಲೇಜೊಂದರಲ್ಲಿ ವಾಲಿಬಾಲ್ ಆಡಲು ಹಾಗೂ ತರಬೇತಿ ನೀಡಲು ಬರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಉಜಿರೆಯ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗುಂಪೊಂದು ಎ.26ರಂದು ಉಜಿರೆಯಲ್ಲಿ ಸಯ್ಯದ್ನನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಪೊಲೀಸರು ಸಯ್ಯದ್ನನ್ನು ವಶಕ್ಕೆ ಪಡೆದಿದ್ದರು.
ವಿದ್ಯಾರ್ಥಿನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಎ.26ರಂದು ಸಯ್ಯದ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಬಂಧಿಸಿದ ಬೆಳ್ತಂಗಡಿ ಪೊಲೀಸರು ಮಂಗಳೂರು ಫೋಕ್ಸೊ ನ್ಯಾಯಾಲಯದ ನ್ಯಾಯಧೀಶರ ಮನೆಯಲ್ಲಿ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಹಲ್ಲೆಗೆ ಒಳಗಾದ ಸಯ್ಯದ್ ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.