ಪುತ್ತೂರು: ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಅವರ ಮುತುವರ್ಜಿಯಲ್ಲಿ, ಕಾಸರಗೋಡಿನ ಲೇಖಕಿ ಶೀಲಾ ಲಕ್ಷ್ಮೀ ಅವರು ಬರೆದ ಕೃತಿ ‘ಕುಂಕುಮ ಮಹತಿ’ ಯು ಭಾನುವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣ ದಲ್ಲಿ ಲೋಕಾರ್ಪಣೆ ಗೊಂಡಿತು.

ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ, ಮುಳಿಯ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್ ಕೃತಿ ಲೋಕಾರ್ಪಣೆ ಮಾಡಿ, ಮಹತಿ ಎಂದರೆ ಮಹತ್ವದಲ್ಲಿ ದೊಡ್ಡದು. ಗುಣದಲ್ಲಿ ಜೇಷ್ಠತ್ವ ಮುಖ್ಯ.ಕುಂಕುಮದ ಮಹತ್ವ ಕೃತಿಯಲ್ಲಿ ಕುಂಕುಮಕ್ಕಿಂತ ಹೆಚ್ಚು ಲಲಿತೆಯ ಮಾಹಿತಿಯು ಇದೆ. ಕುಂಕುಮ ದ ಬಗ್ಗೆ ಬರೆಯಬೇಕಾದರೆ ತಾಯಿ, ಜಗನ್ಮಾತೆಯ ಉಲ್ಲೇಖವೂ ಬೇಕು ಎಂದ ಅವರು, ಮುಖ ನೋಡಿದಾಗ ಆ ವ್ಯಕ್ತಿಯ ಮನಸ್ಸು ಗೊತ್ತಾಗುತ್ತದೆ. ವಿದ್ಯೆಯ ಜತೆ ವಿನಯವೂ ಇದ್ದರೆ ಮಾತ್ರ ಮನುಷ್ಯನಿಗೆ ಗೌರವ. ಕುಂಕುಮ ಒಳಗಡೆ ಇರುವ ಚಕ್ರಗಳಿಗೆ ಪ್ರೇರಣೆ ತುಂಬುತ್ತದೆ. ಸನಾತನ ಧರ್ಮದ ಆಚರಣೆ, ಸಂಸ್ಕಾರಗಳನ್ನು ಎಳೆಯ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದರು.
ಲೇಖಕಿ ಶೀಲಾ ಲಕ್ಷ್ಮಿ ಅವರು ಕೃತಿಯ ಪರಿಚಯ ಮಾಡಿ, ಕರಾವಳಿ ಭಾಗದಲ್ಲಿ ಜನ ಜೀವನದಲ್ಲಿ ನೀತಿ-ನಿಯಮ, ಕಟ್ಟು ಪಾಡುಗಳನ್ನು ಆಚರಿಸುತ್ತಾ ಬಂದಿದ್ದೇವೆ. ಇವು ನಂಬಿಕೆ ಆಧಾರದಲ್ಲಿ ನಿಂತಿವೆ. ಹಿಂದೆಯೂ ಕುಂಕುಮ ಧಾರಣೆ ಕಡ್ಡಾಯವಾಗಿತ್ತು. ಚಂಚಲ ಮನಸ್ಸನ್ನು ಇದು ನಿಯಂತ್ರಿಸುತ್ತದೆ ಎಂಬ ನಂಬಿಕೆ ಇತ್ತು ಎಂದು ಹೇಳಿದರು. ಕುಂಕುಮ ದುಷ್ಟ ಸಂಹಾರದ ಪ್ರತೀಕ. ನಮ್ಮ ಅರೀಶಡ್ವಾರ ಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಸಾಧ್ಯ ಎಂದರು. ಕೃತಿ ರಚನೆಯ ಸಂದರ್ಭ ಸಹಕಾರ, ಬೆಂಬಲ ನೀಡಿದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಸಹಿತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಾವಯವ ಕುಂಕುಮವನ್ನು ಮಕ್ಕಳಿಗೆ ತಿಲಕವಿಡುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅನಾವರಣಗೊಳಿಸಿದರು. ಧಾರ್ಮಿಕ ಶಿಕ್ಷಣ ಬೋಧಿಸುವ ಗುರುಗಳಾದ ಡಾ. ವಿಜಯ ಸರಸ್ವತಿ ಹಾಗೂ ಶಂಕರಿ ಶರ್ಮ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ದೇವಾಲಯ ಸಂವರ್ಧನ ಸಮಿತಿಯ ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತಾವಿಕವಾಗಿ ಮಾತನಾಡಿದ ಕೃಷ್ಣವೇಣಿ ಪ್ರಸಾದ್ ಮುಳಿಯ, ಪ್ರತಿ ದೇವಾಲಯಗಳಲ್ಲಿ ಕುಂಕುಮಾರ್ಚನೆ ನಡೆಯಬೇಕು. ಸದ್ವಿಚಾರಗಳು ಮಕ್ಕಳಿಗೆ ತಿಳಿಯಬೇಕು,ಮಾತೆಯರ ಮೂಲಕ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಉಳಿಯುವಂತಾಗ ಬೇಕು. ಇದೇ ಮಾರ್ಗದಲ್ಲಿ ಕುಂಕುಮದ ಮಹತ್ವ ತಿಳಿಸುವ ಹೊತ್ತಗೆಯನ್ನು ಹೊರತರಲಾಗಿದೆ ಎಂದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್, ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ ಪ್ರಮುಖ್ ಗಣೇಶ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವೇಕಾನಂದ ಸ್ನಾತಕೋತ್ತರ ವಿಭಾಗ ದ ಡೀನ್ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.
ಕೃತಿ ಲೋಕಾರ್ಪಣೆಯ ಬಳಿಕ ಭಗವತ್ ಭಕ್ತ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.