ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿ ಏ.28 ಸೋಮವಾರ ನಡೆಯಲಿದೆ.
ನಡಾವಳಿಯ ಪೂರ್ವಭಾವಿಯಾಗಿ ಇಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಮಕರತೋರಣರೋಹಣ, ಶ್ರೀ ದೈವಗಳ ಭಂಡಾರ ತೆಗೆದು ಮೂಲಸ್ಥಾನದಿಂದ ನೇಮ್ ನಡೆಯುವ ದೈವಸ್ಥಾನಕ್ಕೆ ಆಗಮನ, ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆಯಲಿದೆ.ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆದು ಕಟ್ಟೆಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಶ್ರೀ ಉಳ್ಳಾಲ್ತಿ ದೈವದ ನೇಮ ನಡೆಯಲಿದೆ.ಇದೇ ಸಂದರ್ಭದಲ್ಲಿ ಶ್ಯಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ಉಳ್ಳಾಲ್ತಿ ದೈವಕ್ಕೆ ಮುಡಿದು ನೇಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2 ಗಂಟೆಯಿಂದ ಶ್ರೀಕಾಳರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಲಿದೆ.
ಈ ಬಾರಿ ನೇಮೋತ್ಸವದಲ್ಲಿ ವಿಶೇಷವಾಗಿ ಮಲ್ಲಿಗೆ ಪ್ರಿಯೆ ಉಳ್ಳಾಲ್ತಿಗೆ ಗೆ ಊರ, ಪರವೂರ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣಗೊಂಡಿರುವ ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ ಹಾಗೂ ಬೆಳ್ಳಿಯ ಗಗ್ಗರದ ಸಮರ್ಪಣೆ ನಡೆಯಲಿದೆ.