ಧಗಧಗನೇ ಉರಿದ ಬಸ್; 25 ಪ್ರಯಾಣಿಕರು ಅದೃಷ್ಟವಶಾತ್ ಪಾರು
ಮಂಡ್ಯ: ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಇಂದು ನಸುಕಿನ ಹೊತ್ತು ಮಂಡ್ಯದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ. ಚಲಿಸುತ್ತಿರುವಾಗಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಚಾಲಕನ ಸಮಯ ಪ್ರಜ್ಞಯಿಂದಾಗಿ ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ಈ ಘಟನೆ ಮುಂಜಾನೆ 5 ಗಂಟೆ ವೇಳಗೆ ಸಂಬವಿಸಿದೆ.
ಇಂದು ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಉಡುಪಿಯಿಂದ ಬೆಂಗಳೂರು ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಕದಬಹಳ್ಳಿ ಬಳಿ ಇದ್ದಕ್ಕಿದ್ದಂತೆ ಬಸ್ನಲ್ಲಿ ಬೆಂಕಿ ಕಾಣಿಸಿದೆ. ಕೂಡಲೇ ಬಸ್ ಚಾಲಕ ಬಸ್ನಲ್ಲಿ ಇದ್ದ 25 ಮಂದಿ ಪ್ರಯಾಣಿಕರನ್ನು ತಮ್ಮ ಲೆಗೇಜ್ ಸಹಿತ ಕೆಳಗೆ ಇಳಿಯಲು ಹೇಳಿದ್ದಾನೆ.
ಬಸ್ನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಿದ್ದು, ನೋಡ ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಸ್ನ ಬೆಂಕಿಯನ್ನು ಹಾರಿಸಿದ್ದಾರೆ. ಬಸ್ನಲ್ಲಿ ಹೇಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿಲ್ಲ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.