ಪುತ್ತೂರು: ಕರಾವಳಿ ಪ್ರದೇಶದ ಮಾಜಿ ಬಿಎಸ್ಎಫ್ ಯೋಧರ ಮತ್ತು ಅವರ ಕುಟುಂಬಗಳ ಕ್ಷೇಮಾಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಸರಕಾರದಿಂದ ಮಾಜಿ ಯೋಧರಿಗೆ ಮತ್ತು ವಿಧವೆಯರಿಗೆ ಸಿಗುವ ಸವಲತ್ತುಗಳನ್ನು ಒದಗಿಸುವ ಸದುದ್ದೇಶದಿಂದ, ಬಿಎಸ್ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶಗಳನ್ನು ರಚಿಸುವ ಉದ್ದೇಶದಿಂದ ಸಮಾರಂಭವನ್ನು ಏ.27 ಭಾನುವಾರ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು ಮಾಜಿ ಬಿಎಸ್ ಎಫ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಮಾಜಿ ಬಿಎಸ್ ಎಫ್ ಡೆಪ್ಯುಟಿ ಕಮಾಡೆಂಟ್ ಡಿ.ಚಂದಪ್ಪ ಮೂಲ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿ.ಸಿ.ರೋಡಿನ ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಕೆ.ಜಯರಾಮ್ ರೈ, ಸಮಾರಂಭ ಉದ್ಘಾಟಿಸಿ, ನಾಮಫಲಕ ಬಿಡುಗಡೆ ಮಾಡುವರು. ಕರಾವಳಿ ಜಿಲ್ಲೆಗಳ (ಕಾರವಾರದಿಂದ-ಕಾಸರಗೋಡು) ಐದು ಜಿಲ್ಲೆಗಳ ನೂರಾರು ಮಾಜಿ ಬಿಎಸ್ಎಫ್ ಯೋಧರು ಮತ್ತು ಮಾಜಿ ಯೋಧರ ವಿಧವೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
























