ಅಂತಿಮ ದರ್ಶನ ಪಡೆದು ಕಣ್ಣೀರಾದ ಸಿದ್ದರಾಮಯ್ಯ, ಸೋಮಣ್ಣ, ತೇಜಸ್ವಿ ಸೂರ್ಯ
ಬೆಂಗಳೂರು: ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಮುಂಜಾನೆ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಆಗಮಿಸಿದಾಗ ಸಂಬಂಧಿಕರ ದುಃಖದ ಕಟ್ಟೆಯೊಡೆಯಿತು.
ಈ ವಿಮಾನಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಮೃತರ ಕುಟುಂಬಸ್ಥರು ಆಗಮಿಸಿದ್ದರು. ಕೇಂದ್ರ ಸಚಿವ ಸೋಮಣ್ಣ ಮೃತದೇಹವನ್ನು ಸ್ವೀಕರಿಸಿ ಅಂತಿಮ ನಮನ ಸಲ್ಲಿಸಿದರು. ವಿಮಾನ ನಿಲ್ಥಾಣದ ಒಳಗಡೆ ಸಚಿವ ಸೋಮಣ್ಣ ಮತ್ತು ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಬಳಿಕ ಸರ್ಕಾರ ಕುಟುಂಬಸ್ಥರಿಗೆ ಎರಡು ಮೃತ ದೇಹಗಳ ಹಸ್ತಾಂತರ ಮಾಡಿತು. ಒಂದು ಅಂಬುಲೆನ್ಸ್ನಲ್ಲಿ ಬೆಂಗಳೂರಿನ ಮತ್ತಿಕೇರೆಯಲ್ಲಿರುವ ಸುಂದರನಗರಕ್ಕೆ ಭರತ್ ಭೂಷಣ್ ಶವ ಮತ್ತೊಂದು ಅಂಬುಲೆನ್ಸ್ನಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥಿವ ಶವವವನ್ನು ಕಳುಹಿಸಲಾಯಿತು.
ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂಗೆ ಮಗುವನ್ನು ತೋರಿಸಿ ಘಟನೆಯ ಕರಾಳತೆಯನ್ನು ಹೇಳಿ ಭರತ್ ಪತ್ನಿ ಸುಜಾತ ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು. ಸಿದ್ದರಾಮಯ್ಯ ಅವರ ಜೊತೆ ಸಚಿವ ರಾಮಲಿಂಗಾರೆಡ್ಡಿಯವರು ಸಹ ಭರತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಬೆಳಗ್ಗೆ 5.30ರ ವೇಳೆಗೆ ಭರತ್ ಭೂಷಣ್ ಮೃತದೇಹ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ನಿವಾಸದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಭರತ್ ಸ್ಮರಣೆಗಾಗಿ ಪಾರ್ಕ್ಗೆ ಭರತ್ ಭೂಷಣ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಭರತ್ ಭೂಷಣ್ ಇದೇ ಪಾರ್ಕ್ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಭರತ್ ಸ್ಮರಣೆಗಾಗಿ ಶಾಸಕ ಮುನಿರತ್ನ ಅವರು ಭರತ್ ಹೆಸರನ್ನೇ ಪಾರ್ಕ್ಗೆ ನಾಮಕರಣ ಮಾಡಿದ್ದಾರೆ.