ವೀಡಿಯೊ ವೈರಲ್ ಆದ ಬಳಿಕ ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು
ಮಂಗಳೂರು: ಮುಡಿಪು -ಸ್ಟೇಟ್ ಬ್ಯಾಂಕ್ ಮಧ್ಯೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ನಿರ್ವಹಕ ಚಲಿಸುತ್ತಿರುವ ಬಸ್ಸಿನಲ್ಲೇ ಯುವತಿಗೆ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ನಿದ್ರಿಸುತ್ತಿದ್ದ ಯುವತಿಗೆ ನಿರ್ವಾಹಕ ಕಿರುಕುಳ ನೀಡಿದ್ದು, ಪ್ರಯಾಣಿಕರೊಬ್ಬರು ಇದನ್ನು ವೀಡಿಯೊ ಮಾಡಿದ್ದರು.
ಈ ವೀಡಿಯೊ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು, ಆರೋಪಿ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್ (40) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 22ರಂದು ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್ನತ್ತ ತೆರಳುತ್ತಿದ್ದ ಬಸ್ನಲ್ಲಿ ಯುವತಿ ನಿದ್ರೆಗೆ ಜಾರಿದ್ದರು. ಆ ಸಂದರ್ಭದಲ್ಲಿ ಕಂಡಕ್ಟರ್ ಆ ಯುವತಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ನಿರ್ವಾಹಕ ಈಶ್ವರ್ ಯುವತಿಯ ದೇಹವನ್ನು ಸ್ಪರ್ಶಿಸಲು ಮುಂದಾಗಿದ್ದಾನೆ. ಈ ಸಂದರ್ಭ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ಸದ್ದಿಲ್ಲದೆ ವೀಡಿಯೊ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.