ವಾರ್ಷಿಕ ಜಾತ್ರೆ ವೇಳೆ ಸಂಭವಿಸಿದ ದುರ್ಘಟನೆ
ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ದುರ್ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.
ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಭಾಗ ಮುರಿದು ಬಿದ್ದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಇದ್ದರು. ಅರ್ಚಕರು ರಥದಲ್ಲೇ ಇದ್ದರು. ಆದರೆ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಬಳಿಕ ದೇವಿಯನ್ನು ಚಂದ್ರಮಂಡಲ ರಥದಲ್ಲಿ ಕೂರಿಸಿ ಉತ್ಸವ ಮುಂದುವರಿಸಿ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಉತ್ಸವ ಸಂದರ್ಭದಲ್ಲೇ ಬ್ರಹ್ಮರಥ ಮುರಿದು ಬಿದ್ದಿರುವುದು ಭಕ್ತರ ಮತ್ತು ಕ್ಷೇತ್ರದವರ ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಶಯನೋತ್ಸವ ಬಹಳ ಪ್ರಸಿದ್ಧವಾಗಿದೆ. ದೇವಿ ಮಲ್ಲಿಗೆ ಹೂಗಳ ಮೇಲೆ ಪವಡಿಸುತ್ತಾರೆ ಎಂಬ ನಂಬಿಕೆಯಿದೆ. ಶುಕ್ರವಾರ ರಾತ್ರಿ ನೆರವೇರಿದ ಶಯನೋತ್ಸವಕ್ಕೆ ಭಕ್ತರು 1.5 ಲಕ್ಷಕ್ಕೂ ಅಧಿಕ ಅಟ್ಟೆ ಮಲ್ಲಿಗೆ ಹೂಗಳನ್ನು ಅರ್ಪಿಸಿದ್ದರು.