ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತ ಜಯಘೋಷಗಳೊಂದಿಗೆ ಗುರುವಾರ ರಾತ್ರಿ ನಡೆಯಿತು.
ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶ್ರೀ ದೇವರು ರಥಬೀದಿಗೆ ಬಂದು, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾದರು.
ಬಳಿಕ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದು ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ಬಾನೆತ್ತರದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಭಕ್ತರು ಹರ್ಷೋದ್ದಾರವಾದರು.
ಸಿಡಿಮದ್ದು ಪ್ರದರ್ಶನ ಮುಗಿದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆದರು. ಲಕ್ಷಾಂತರ ಭಕ್ತಾದಿಗಳು ಬ್ರಹ್ಮರಥೋತ್ಸವವನ್ನು ಕಂಡು ಪುನೀತರಾದರು.
ವೈಭವದ ಬ್ರಹ್ಮರಥೋತ್ಸವ ನಡೆದ ಬಳಿಕ ಬಲ್ನಾಡಿನ ಶ್ರೀ ದೈವಗಳನ್ನು ಬೀಳ್ಕೊಡಲಾಯಿತು. ಬಳಿಕ ಶ್ರೀ ದೇವರು ಬಂಗರ್ ಕಾಯರ್ ಕಟ್ಟೆಗೆ ತೆರಳಿದರು. ಬಳಿಕ ಅಲ್ಲಿಂದ ಮಧ್ಯರಾತ್ರಿ ವೇಳೆ ಶ್ರೀ ದೇವಸ್ಥಾನಕ್ಕೆ ಪುನಃ ಆಗಮಿಸಿದರು.
ಇಂದು ಅವಭೃತ ಸವಾರಿ :
ಇಂದು ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ತೆರಳುವರು. ಸಂಜೆ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಬಲಿ ಉತ್ಸವ ನಡೆದು ರಕ್ತೇಶ್ವರಿ ದೈವದೊಂದಿಗೆ ನುಡಿಗಟ್ಟು ನಡೆದ ಬಳಿಕ ಶ್ರೀ ದೇವರ ಅವಭೃತ ಸವಾರಿ ನಡೆಯಲಿದೆ.