ರಾಜ್ಯಾದ್ಯಂತ ಅಕ್ರೋಶಕ್ಕೆ ಕಾರಣವಾಗಿದ್ದ ಕೃತ್ಯದ ಆರೋಪಿ
ಬೆಂಗಳೂರು : ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹಿಂದಿನಿಂದ ಬಂದು ಕಿರುಕುಳ ನೀಡಿ ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 10 ದಿನಗಳ ಬಳಿಕ ಆರೋಪಿ ಸಂತೋಷ್ ಡೆನಿಯಲ್ನನ್ನು ಕೇರಳ ಕೋಝಿಕ್ಕೋಡ್ ಸಮೀಪದ ಹಳ್ಳಿಯೊಂದರಿಂದ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಚಲನವಲನ ಪತ್ತೆಗೆ 1,800ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ಪತ್ತೆಗಾಗಿ ಡಿಸಿಪಿ ಸಾರಾ ಫಾತಿಮಾ ಎರಡು ವಿಶೇಷ ತಂಡ ರಚಿಸಿದ್ದರು.
ಏಪ್ರಿಲ್ 3ರಂದು ನಸುಕಿನ ಹೊತ್ತು ಸ್ನೇಹಿತೆ ಜತೆ ಯುವತಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದಿನಿಂದ ಬಂದು ಕಿರುಕುಳ ನೀಡಿ ಪರಾರಿಯಾಗಿದ್ದ. ಸಂತ್ರಸ್ತೆಗೂ ಆರೋಪಿಗೂ ಯಾವುದೇ ಪರಿಚಯ ಇರಲಿಲ್ಲ. ಘಟನೆ ಬಳಿಕ ಬೆಂಗಳೂರು ನಗರ ತೊರೆದಿದ್ದ ಆರೋಪಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ದೂರು ನೀಡಿದ್ದರು.
ಗೃಹ ಸಚಿವ ಜಿ.ಪರಮೇಶ್ವರ್ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಕೃತ್ಯಗಳು ಸಾಮಾನ್ಯ ಎಂದು ಹೇಳಿ ಘಟನೆಯಲ್ಲಿ ಹಗುರವಾಗಿ ಪರಿಗಣಿಸಿದ್ದು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಪರಮೇಶ್ವರ್ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು. ಆರೋಪಿ ಬೆಂಗಳೂರಿನ ತಿಲಕ ನಗರದ ಗುಲ್ವಾರ್ಗ ಕಾಲೋನಿಯಲ್ಲಿ ವಾಸವಾಗಿದ್ದ. 26 ವರ್ಷ ವಯಸ್ಸಿನ ಆತ ಕಾರ್ ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಅವನ ಪತ್ತೆಗಾಗಿ ಸುಮಾರು 1800 ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಆತ ತಮಿಳುನಾಡು, ಕೇರಳದಲ್ಲಿ ತಪ್ಪಿಸಿಕೊಂಡು ಓಡಾಡುತ್ತಿರುವ ವಿಚಾರ ತಿಳಿದುಬಂದಿತ್ತು.
ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಕೃತ್ಯದ ವೇಳೆ ಆತ ಬಳಸಿದ್ದ ಬೈಕ್ ನಂಬರ್ ಆಧರಿಸಿ ಗುರುತು ಪತ್ತೆಹೆಚ್ಚಲಾಗಿತ್ತು. ನಂತರ ಆತನ ಮನೆಯವರ ಬಳಿ ವಿಚಾರಿಸಿದಾಗ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಬಳಿಕ ಮೊಬೈಲ್ ಕೂಡ ಬಳಸದೆ ಆರೋಪಿ ಪರಾರಿಯಾಗಿದ್ದ. ಆತ ಕೇರಳದ ಸಂಬಂಧಿಕರ ಮನೆಯಲ್ಲಿ ಇರುವುದು ಗೊತ್ತಾಗಿ ಪೊಲೀಸರು ಭಾನುವಾರ ಕೊಝಿಕ್ಕೋಡ್ ಸಮೀಪದ ಹಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಆತ ಹೊಸೂರು, ಸೇಲಂ ಮೂಲಕ ಕೇರಳ ತಲುಪಿ ತಲೆಮರೆಸಿಕೊಂಡಿದ್ದ.