ಪುತ್ತೂರು: ರಾಜ್ಯ ಸರಕಾರ ಒಂದೆಡೆ ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಮರೆತು, ಇನ್ನೊಂದೆಡೆ ನೆಲ-ಜಲ ಎಲ್ಲವನ್ನೂ ಬಿಡದೆ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಲೂಟುತ್ತಿದ್ದು, ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿಯನ್ನು ಖಂಡಿಸಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ಮೂರು ಸಾವಿರ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಜೆಟ್ ನಲ್ಲಿ ಒಂದು ವರ್ಗಕ್ಕೆ ಶೇ.4 ಗುತ್ತಿಗೆಯನ್ನು ನೀಡುವ ಮೂಲಕ ಒಂದು ವರ್ಗದ ಓಲೈಕೆ ಮಾಡುತ್ತಿದ್ದು, ಹಿಂದೂ ವಿರೋಧಿ ನೀತಿ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಹಾಲಿನ ದರವನ್ನು ಎರಡು ವರ್ಷದಲ್ಲಿ ಮೂರು ಬಾರಿ ಹೆಚ್ಚಿಸಿ ಕಳೆದ ಆರು ತಿಂಗಳಿಂದ ಸುಮಾರು 600 ಕೋಟಿ ಸಹಾಯಧನ ನೀಡದೆ ರೈತರನ್ನು ವಂಚಿತರನ್ನಾಗಿ ಮಾಡಿದೆ. ವಿದ್ಯುತ್ ದರ ಯುನಿಟ್ ಗೆ 36 ಪೈಸೆ ಹೆಚ್ಚಳ, ಬಸ್ ದರ 15 ರಿಂದ 20 ಶೇ., ಮೆಟ್ರೋ ದರ 100 ಶೇ. ಹೆಚ್ಚಳ ಡಿಸೇಲ್ ಬೆಲೆ 2 ಹೆಚ್ಚಳ, ಸ್ಮಾರ್ಟ್ ಮೀಟರ್ 750 ರಿಂದ 2500 ರೂ. ಹೆಚ್ಚಳ ಹೀಗೆ ಜಲ-ನೆಲ ಎಲ್ಲವನ್ನೂ ಬಿಡದೆ ದರ ಹೆಚ್ಚಿಸುವ ಮೂಲಕ ಒಂದೆಡೆಯಿಂದ ಸರಕಾರ ಜನರಿಗೆ ಚಿನ್ನದ ಚಾಕು ಕೊಟ್ಟು, ಇನ್ನೊಂದೆಡೆ ಕಬ್ಬಿಣದ ಚೂರಿಯಿಂದ ಇರಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ 10 ರಿಂದ 20 ರೂ. ಹೆಚ್ಚಳ, ಡೆತ್ ಪ್ರಮಾಣ ಪತ್ತವನ್ನು 250 ರಿಂದ 300, ಮೆಡಿಕಲ್ ಸರ್ಟಿಫಿಕೇಟನ್ನು 250 ರಿಂದ 300 ಕ್ಕೆ ಹೆಚ್ಚಳ, ರಕ್ತ ಪರೀಕ್ಷೆ ಶುಲ್ಕ 70 ರಿಂದ 120 ಹೀಗೆ ರೋಗಿಗಳ ರಕ್ತವನ್ನೂ ಸರಕಾರ ಬಿಟ್ಟಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುರುಷೋತ್ತಮ ಮುಂಗ್ಲಿಮನೆ, ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು.