ಉದ್ಯಮಿಗೆ ಹನಿಟ್ರ್ಯಾಪ್‌ : ಶಿಕ್ಷಕಿ ಸಹಿತ ಮೂವರು ಸೆರೆ

ವಿದ್ಯಾರ್ಥಿಗಳ ತಂದೆಯನ್ನೇ ಬಲೆಗೆ ಕೆಡವಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ಟೀಚರ್‌

ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ ಲಕ್ಷಗಟ್ಟಲೆ ಹಣ ವಸೂಲು ಮಾಡಿದ ಶಿಕ್ಷಕಿ ಮತ್ತು ಆಕೆಯ ಇಬ್ಬರು ಸಹಚರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಮಾಡಿದ ಶಿಕ್ಷಕಿ. ತನ್ನ ಶಾಲೆಗೆ ಬರುತ್ತಿದ್ದ ಮಕ್ಕಳ ತಂದೆಯನ್ನೇ ಬಲೆಗೆ ಕೆಡವಿಕೊಂಡು ಶ್ರೀದೇವಿ ಬ್ಲ್ಯಾಕ್‌ಮೇಲ್‌ ಮಾಡಿದ್ದಳು.

ರಾಕೇಶ್ ಎಂಬ ಉದ್ಯಮಿಯ ಮಕ್ಕಳು ಶ್ರೀದೇವಿ ಕಲಿಸುತ್ತಿದ್ದ ಪ್ರೀಸ್ಕೂಲ್‌ಗೆ ಬರುತ್ತಿದ್ದರು. ಎರಡು ವರ್ಷಗಳಿಂದೀಚೆಗೆ ಶ್ರೀದೇವಿ ಈ ಉದ್ಯಮಿಯ ಸ್ನೇಹ ಗಳಿಸಿದ್ದಳು. ರಾಕೇಶ್​​ರಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 4 ಲಕ್ಷ ರೂ. ಸಾಲ ಪಡೆದಿದ್ದಳು. 2024ರ ಮಾರ್ಚ್​ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಆದರೆ ಹಣ ವಾಪಸ್ ಕೇಳಿದಾಗ ತುಂಬಾ ಕಷ್ಟವಿದೆ. ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ ಎಂದಿದ್ದಳು. ನಂತರ ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಾಟ ನಡೆಸಿದ್ದಾರೆ. ಶ್ರೀದೇವಿ‌ ಜೊತೆ ಮಾತನಾಡಲೆಂದೇ ರಾಕೇಶ್ ಹೊಸ ಸಿಮ್ ಹಾಗೂ ಫೋನ್ ಖರೀದಿಸಿದ್ದರು. ಕಳೆದ ಜನವರಿಯಲ್ಲಿ ಹಣ ವಾಪಸ್ ಕೇಳಿದಾಗ ರಾಕೇಶ್​ಗೆ ನಿನ್ನ ಜೊತೆ ರಿಲೇಶನ್‌ಶಿಪ್​​ನಲ್ಲಿ ಇರುತ್ತೇನೆ ಎಂದು ಹೇಳಿದ್ದ ಶ್ರೀದೇವಿ 15 ಲಕ್ಷ ರೂ. ಕೇಳಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ. ನಂತರ ಶ್ರೀದೇವಿ ಬ್ಲ್ಯಾಕ್​ಮೇಲ್ ಶುರು ಮಾಡಿದ್ದು, ಮೊದಲು 50 ಸಾವಿರ ರೂ. ಪಡೆದಿದ್ದಳು. ಬಳಿಕ

































 
 

ಪದೇಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆಕೆ ಜತೆ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್ ಅನ್ನು ರಾಕೇಶ್ ಮುರಿದು ಬಿಸಾಡಿದ್ದರು. ಮಾರ್ಚ್ 12ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಪ್ರೀಸ್ಕೂಲ್​​ಗೆ ರಾಕೇಶ್ ತೆರಳಿದ್ದರು. ಆಗ ಅಲ್ಲಿ ಶ್ರೀದೇವಿ ಜೊತೆಗಿದ್ದ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದರು. ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ ಆರೋಪಿ ಗಣೇಶ್ ಬೆದರಿಕೆ ಹಾಕಿದ್ದ. ಬಳಿಕ ಕಾರಿನಲ್ಲಿ‌ ಕೂರಿಸಿಕೊಂಡು, ಪತ್ನಿಗೆ ವಿಚಾರ ಹೇಳಬಾರದು ಎಂದರೆ 1 ಕೋಟಿ‌ ರೂ. ಕೊಡು ಎಂದು ಬ್ಲ್ಯಾಕ್​ಮೇಲ್ ಮಾಡಿದ್ದ. ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ, ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರಾಕೇಶ್ ದೂರಿನಲ್ಲಿ ತಿಳಿಸಿದ್ದಾರೆ. ರಾಕೇಶ್ ಸಿಸಿಬಿ ಪೊಲೀಸರಿಗೆ ನೀಡಿದ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್​ರನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ಕೂಡ ವಿಜಯಪುರ ಮೂಲದವರಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top