ಕೇಂದ್ರ ಸರಕಾರಿ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳಿಗೆ ಏ.14ರಂದು ರಜೆ
ನವದೆಹಲಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವಾದ ಏ.14ರಂದು ಸಾರ್ವತ್ರಿಕ ರಜೆ ಘೋಷಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳಿಗೆ ಅಂದು ರಜೆಯಿರುತ್ತದೆ.
ಅಂಬೇಡ್ಕರರ ಜಯಂತಿ ದಿನದಂದು ರಾಷ್ಟ್ರೀಯ ರಜೆ ಇರಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಘೋಷಣೆ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಸಂವಿಧಾನ ಶಿಲ್ಪಿ, ನಮ್ಮ ಬಾಬಾ ಸಾಹೇಬ್ ಪೂಜ್ಯ ಡಾ.ಭೀಮರಾವ್ ಅಂಬೇಡ್ಕರ್ಜಿ ಅವರ ಜನ್ಮದಿನದಂದು ಈಗ ಸಾರ್ವಜನಿಕ ರಜೆ ಇರುತ್ತದೆ. ಬಾಬಾ ಸಾಹೇಬರ ಕಟ್ಟಾ ಅನುಯಾಯಿ, ಗೌರವಾನ್ವಿತ ಪ್ರಧಾನಿಯವರು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಭಾರತದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು ಏಪ್ರಿಲ್ 14ರ ಸೋಮವಾರದಂದು ಮುಚ್ಚಲಿವೆ. ಈ ನಿರ್ಧಾರದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸಲು ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ.