ಪುತ್ತೂರು: ನಮ್ಮ ರಾಷ್ಟ್ರದ ಸ್ಥಾನಮಾನ ಅನಾವರಣವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರುತ್ತದೆ. ಭಾರತಕ್ಕೆ ಒಂದು ಸಾಂಸ್ಕೃತಿಕ ಪರಂಪರೆ ಇದೆ, ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇಂತಹ ಸಂದರ್ಭದಲ್ಲಿ ಯುವಜನತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಕೀಳರಿಮೆಯ ಮಾನಸಿಕತೆಯನ್ನು ಬಿಟ್ಟು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು, ಹಾಗಿದ್ದಾಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಅವರು ಶನಿವಾರ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಹಿತ ಚಿಂತನೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ವಿವೇಕಾನಂದ ವಿದ್ಯಾಸಂಸ್ಥೆ ಪ್ರಾರಂಭವಾಯಿತು. ವಿದ್ಯಾರ್ಥಿಗಳಲ್ಲಿ ಸಮಾಜದ ಚಿಂತನೆ, ಸೇವೆಯ ಮನೋಭಾವ ಬೆಳೆಸಲು ಈ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಶುಭಹಾರೈಸಿದರು. ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ವಿವೇಕ ಸ್ಮೃತಿ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಗೌರಿ ಪೈ( ವೈದ್ಯಕೀಯ ಮತ್ತು ಸಮಾಜ ಸೇವೆ ), ಎಂ. ರಾಮ ಮೋಹನ್ ರಾವ್ (ಕಾನೂನು), ಡಾ. ಮೋಹನ್ ಕುಮಾರ್ ವೈ (ಸಾಮಾಜಿಕ ಹೋರಾಟ ), ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ (ಶಿಕ್ಷಣ ಕ್ಷೇತ್ರ ), ಸತ್ಯಶಂಕರ್ (ಉದ್ಯಮ ಮತ್ತು ವ್ಯವಹಾರ),ವೇ. ಮೂ. ಕಶೆಕೊಡಿ ಸೂರ್ಯನಾರಾಯಣ ( ಧಾರ್ಮಿಕ ಮತ್ತು ಸಮಾಜ ಸೇವೆ), ಡಾ. ರವೀಶ್ ಪಡುಮಲೆ(ಜನಪದ), ದೇವಿ ಪ್ರಸಾದ್ ಕಡಮಜೆ (ಕೃಷಿ), ಪಿ. ಜಿ.ಎಸ್.ಎನ್.ಪ್ರಸಾದ್ (ಮಳೆ ದಾಖಲೀಕರಣ), ನಾಯಕ್ ಪಾಲೆಚ್ಚಾರು ( ಯಕ್ಷಗಾನ) ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಹೆಚ್. ಜಿ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದರು.
ಬಳಿಕ ಮೈಸೂರಿನ ಸರಗೂರು ವಿವೇಕಾನಂದ ಆಸ್ಪತ್ರೆಯ ಮೂಳೆಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ. ಸೀತಾರಾಮ್ ಎಂ.ಆರ್ ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ: ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಿಕೊಟ್ಟರು.
ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ, ಪ್ರಿನ್ಸಿಪಾಲ್ ಪ್ರೊ. ವಿಷ್ಣು ಗಣಪತಿ ಭಟ್ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರೊ. ಲಕ್ಷ್ಮಿ ಭಟ್ ಕಾರ್ಯಕ್ರಮ ನಿರ್ವಹಿಸಿದರು.