ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಮಕ್ಕಳಿಂದು ಅಖಿಲ ನಿನಾದದ ಸವಿಯುಂಡರು.
ಪರೀಕ್ಷೆ ಮುಗಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಲು ಸಂಗೀತ ವೇದಿಕೆಯನ್ನು ಸಜ್ಜು ಗೊಳಿಸಲಾಗಿತ್ತು. ವಿಶೇಷವಾಗಿ ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಿ ಆ ಮೂಲಕ ಸಂಗೀತ ಭೂಮಿಕೆಯನ್ನು ನಿರ್ಮಿಸಲಾಗಿತ್ತು.
ಸಂಗೀತ ದೇಸಿ ಕಲೆ :
ಸಂಗೀತವೊಂದು ಸಮ್ಮೋಹನ ಕಲೆ. ಅದು ಎಲ್ಲಾ ಜೀವಿಗಳಿಗೂ ಇಷ್ಟವಾಗುವ ಕಲೆ. ಸಂಗೀತವನ್ನು ಆಲಿಸಿದ ದನಗಳು ಯತೇಚ್ಛವಾಗಿ ಹಾಲು ಕೊಡುತ್ತದೆ. ಮರಗಳು ಹೂ,ಕಾಯಿ, ಹಣ್ಣು ಕೊಡುತ್ತದೆ. ಇಡೀ ಪರಿಸರವೇ ಧನಾತ್ಮಕವಾಗಿ ಇರುತ್ತದೆ. ಅಂತಹ ಅದ್ಭುತ ಶಕ್ತಿ ಇರುವ ಸಂಗೀತ ಆರಾದನಾ ಕಲೆಯೂ ಆಗಿದೆ. ಮಕ್ಕಳಿಗಂತೂ ಜೋಗುಳದಿಂದ ಹಿಡಿದು,ಪ್ರತಿ ಹಂತದಲ್ಲೂ ಹಾಡು ಉತ್ತೇಜನ ನೀಡುತ್ತದೆ.
ಇಂದು ಸಂಗೀತದಲೆಯಲ್ಲಿ ತೇಲಲು ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸಂಗೀತ ಸಾಧಕಿ ಅಖಿಲಾ ನೆಕ್ರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಸಂಗೀತ ಕ್ಷೇತ್ರದ ಅನನ್ಯ ಪ್ರತಿಭೆ ಅಖಿಲಾ ನೆಕ್ರಾಜೆ:
ಅಖಿಲಾ ನೆಕ್ರಾಜೆ ಸವಣೂರು ಸಮೀಪದ ಪುಣ್ಚಪ್ಪಾಡಿ ನೆಕ್ರಾಜೆ ಶೀನಪ್ಪ ಶೆಟ್ಟಿಯವರ ಪುತ್ರಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಸವಣೂರಿನ ವಿದ್ಯಾರಶ್ಮಿ ಸಂಸ್ಥೆಯಲ್ಲಿ ಪೂರೈಸಿ, ಅಂಬಿಕಾ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ ಮುಗಿಸಿ , ಸಂತ ಫಿಲೋಮಿನಾ ದಲ್ಲಿ ಬಿಎಸ್ಸ್ ಸಿ ಪದವಿ ಪಡೆದು ಆ ಬಳಿಕ ಮೈಕ್ರೋ ಬಯಲಾಜಿಯಲ್ಲಿ ಎಂಎಸ್ಸಿ ಪದವಿಯನ್ನು ಮೈಸೂರಿನಲ್ಲಿ ಪಡೆದಿರುವ ಇವರು ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತರು. ನೂರಾರು ಬಹುಮಾನಗಳನ್ನು ಬಾಚಿದವರು. ತುಂಬಾ ಸರಳ ಸಜ್ಜನಿಕೆಯ ಅಖಿಲಾ ತನ್ನ ಸ್ವರ ಮಾದುರ್ಯದಿಂದಲೆ ಹತ್ತಿರವಾಗುತ್ತಾರೆ. ಸಭಾ ಸಮಾರಂಭಗಳಿಗೆ ಇವರ ಪ್ರಾರ್ಥನಾ ಗೀತೆಗೆ ತುಂಬಾ ಬೇಡಿಕೆ ಇದೆ. ಕೃಷಿ ಕುಟುಂಬದಿಂದ ಬಂದ ಇವರು ತಂದೆಯಿಂದಲೇ ಹಾಡಿನ ಭೂಮಿಕೆ ನಿರ್ಮಿಸಿಕೊಂಡಿದ್ದಾರೆ. ಶ್ರೀಮತಿ ಪಾರ್ವತಿ ಪದ್ಯಾಣ ಇವರಲ್ಲಿ ಸಂಗೀತಾಭ್ಯಾಸ, ಕಿರಣ್ ಪುತ್ತೂರು ಇವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಹತ್ತಾರು ಯುಟ್ಯೂಬ್ ಚಾನೆಲ್ ನಲ್ಲಿ ಇವರ ಸುಗಮ ಸಂಗೀತ ಜನ ಮನ್ನಣೆ ಗಳಿಸಿದೆ. ವಿದ್ಯಾಭ್ಯಾಸ ಮಾಡುತ್ತಾ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವ ಇವರು ಸವಣೂರು ಪರಿಸರದ ಮನೆ ಮಂದಿಯ ಮಗಳಾಗಿದ್ದಾರೆ.
ವೀರಮಂಗಲ ಪಿಎಂಶ್ರೀ ಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ ಭಾವಗೀತೆ ಭಕ್ತಿ ಗೀತೆ ಜನಪದ ಗೀತೆ ಹಾಡು ಕಲಿಸಿ ಮಕ್ಕಳು ಖುಷಿಯಲ್ಲಿ ಪಾಲ್ಗೊಳುವಂತೆ ಮಾಡಿದ ಇವರನ್ನು ಶಾಲಾ ಮುಖ್ಯಗುರು ತಾರಾನಾಥ ಸವಣೂರು ಶಾಲು ಹೊದಿಸಿ ಗೌರವಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ. ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ ಸೌಮ್ಯ, ಹೇಮಾವತಿ, ಮಧುಶ್ರೀ, ಸುಮಿತ್ರಾ, ಸಂಚನಾ, ಸವಿತಾ, ಚಂದ್ರಾವತಿ ಸಹಕರಿಸಿದರು.