ಉಪಮುಖ್ಯಮಂತ್ರಿ ಹೇಳಿಕೆಗೆ ಮಂಡ್ಯ ಜಿಲ್ಲೆಯಲ್ಲಿ ಭಾರಿ ಜನಾಕ್ರೋಶ
ಮಂಡ್ಯ: ಮಂಡ್ಯದವರು ಛತ್ರಿಗಳು ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿದೆ. 7ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು ಹೋಯ್ತಾ ಡಿಸಿಎಂ ಅವರೇ? ಮಂಡ್ಯದವರು ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು ನೀವು. ಇಂತಹ ದುರಹಂಕಾರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಅತಿಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಜನರಿಗೆ ಅವಮಾನ ಮಾಡಿದ್ದೀರಿ. ಈ ಮೂಲಕ ಮಂಡ್ಯ ಜನತೆಗೆ ಯುಗಾದಿ ಬೋನಸ್ ಕೊಟ್ಟಿದ್ದೀರಿ ಎಂದು ಸಾಲು ಸಾಲು ಪೋಸ್ಟ್ ಹಾಕಿ ಜನ ಆಕ್ರೋಶ ಸಿಟ್ಟು ಹೊರಹಾಕಿದ್ದಾರೆ.
ಡಿ.ಕೆ ಶಿವಕುಮಾರ್ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಂಡ್ಯಕ್ಕೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಅವರ ಹೇಳಿಕೆ ಖಂಡಿಸದೆ ಮಂಡ್ಯ ಜನರ ಪರ ನಿಲ್ಲದ ಕೈ ಶಾಸಕರು ಛತ್ರಿಗಳು ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.17ರಂದು ನಡೆದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡುತ್ತಿದ್ದಾಗ ಜನ ಫಲಕ ಹಾಗೂ ಭಾವುಟಗಳನ್ನು ಪ್ರದರ್ಶಿಸಿದ್ದರು. ಈ ವೇಳೆ ಸಿಟ್ಟಾದ ಅವರು, ಅದೆಲ್ಲ ಕೆಳಗಿಳಿಸಿ, ನಿಮ್ಮ ಮಂಡ್ಯದವ್ರ ಛತ್ರಿಗಳ ಆಟ ನಿಲ್ಲಿಸಿ ಎಂದು ಗದರಿದ್ದರು.