ಪಾಕ್ ಸೇನೆ ಸುಳ್ಳು ಹೇಳಿ ಜಗತ್ತಿನ ದಿಕ್ಕುತಪ್ಪಿಸಿದೆ ಎಂದು ಆರೋಪ
ಇಸ್ಲಾಮಾಬಾದ್: ಜಾಫರ್ ಎಕ್ಸ್ಪ್ರೆಸ್ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲ 214 ಪ್ರಯಾಣಿಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೇಳಿಕೊಂಡಿದೆ.
ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ಥಾನಿ ಭದ್ರತಾ ಪಡೆಗಳೊಂದಿಗೆ ಇನ್ನೂ ಎನ್ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದೆ.
ಬಿಎಲ್ಎ ಪ್ರತ್ಯೇಕತಾವಾದಿಗಳನ್ನು ಸದೆಬಡಿದು ಜನರ ರಕ್ಷಣೆ ಮಾಡಿರುವುದಾಗಿ ಪಾಕಿಸ್ಥಾನ ಹೇಳಿಕೆ ನೀಡಿತ್ತು. ಆದರೆ, ಈ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ಬಿಎಲ್ಎ ನೀಡಿದೆ. ಪಾಕಿಸ್ಥಾನ ಹೇಳುತ್ತಿರುವುದೆಲ್ಲ ಸುಳ್ಳು ಎಂದಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು 48 ಗಂಟೆಗಳ ಸಮಯ ನೀಡಲಾಗಿತ್ತು. ಪಾಕಿಸ್ಥಾನ ತನ್ನ ಮಾಮೂಲಿ ಮೊಂಡುತನ ಮತ್ತು ಮಿಲಿಟರಿ ದುರಹಂಕಾರವನ್ನು ಪ್ರದರ್ಶಿಸಿತು. ಈ ಹಿನ್ನೆಲೆಯಲ್ಲಿ 214 ಒತ್ತೆಯಾಳುಗಳನ್ನು ಕೊಂದಿದ್ದೇವೆ. ಪಾಕ್ ಮಾತುಕತೆಗೆ ನಿರಾಕರಿಸಿದ ಹಿನ್ನೆಲೆ ಸಾಮೂಹಿಕವಾಗಿ ಹತ್ಯೆ ಮಾಡಿರುವುದಾಗಿ ಬಂಡುಕೋರ ಗುಂಪಿನ ವಕ್ತಾರ ಜೀಯಂಡ್ ಬಲೂಚ್ ಹೇಳಿದ್ದಾನೆ.
ಪಾಕಿಸ್ಥಾನಿ ಸೇನೆಯು ಘಟನೆಯನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಯುದ್ಧ ನಿಯಮಗಳ ಅಡಿ ಕೆಲವರನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಇದನ್ನು ತಪ್ಪಾಗಿ ನಿರೂಪಿಸಿ ಪಾಕ್ ಸುಳ್ಳು ಹೇಳಿದೆ ಎಂದು ಬಿಎಲ್ಎ ಪ್ರತಿಕ್ರಿಯಿಸಿದೆ. ಕಳೆದ ಮಂಗಳವಾರ ಬಲೂಚ್ ಬಂಡುಕೋರರು ಕ್ವೇಟ್ಟಾದಿಂದ ಪೇಷಾವರಕ್ಕೆ ಬರುತ್ತಿದ್ದ ರೈಲನ್ನು ಸುರಂಗ ಮಾರ್ಗದ ಬಳಿ ಸ್ಫೋಟಿಸಿ ಹೈಜಾಕ್ ಮಾಡಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದರು. ೪೮ ತಾಸುಗಳಲ್ಲಿ ಎಲ್ಲ ಬಂಡುಕೋರರನ್ನು ಸಾಯಿಸಿ ಒತ್ತೆಯಾಳುಗಳನ್ನು ಪಾರು ಮಾಡಿದ್ದೇವೆ. 33 ಬಿಎಲ್ಎ ಹೋರಾಟಗಾರರನ್ನು ಸೆದೆಬಡಿದು ಜನರನ್ನು ರಕ್ಷಿಸಿರುವುದಾಗಿ ಪಾಕ್ ಹೇಳಿತ್ತು.