ದೈವಾರಾಧನೆಗೆ ಅಡ್ಡಿಪಡಿಸಿದವರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ
ಮಂಗಳೂರು : ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವದ ಆರಾಧನೆಗೆ ಅಡ್ಡಿಪಡಿಸಿದ ವಿಶೇಷ ಆರ್ಥಿಕ ವಲಯ (ಎಂಎಸ್ಇಝಡ್)ದ ವಿರುದ್ಧ ಮಾ.18ರಂದು ನಡೆಸುದ್ದೇಶಿಸಿದ್ದ ಬೃಹತ್ ಪಾದಯಾತ್ರೆ ತಾತ್ಕಾಲಿಕವಾಗಿ ರದ್ದಾಗಿದೆ.
ಬಜ್ಪೆಯ ಪೇಜಾವರ ಮಾಗಣೆಯ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ಸರಕಾರಿ ಕಂಪನಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಮಾ. 18ರಂದು ಬಜಪೆ-ನೆಲ್ಲಿದಡಿಗುತ್ತು ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ, ದೈವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ ವಿಚಾರದಲ್ಲಿ ಅಧಿಕಾರಿಗಳಿಂದ ಪೂರಕ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಮಾ.18ರಂದು ನಡೆಸಲುದ್ದೇಶಿಸಿದ ಬಜಪೆ-ನೆಲ್ಲಿದಡಿಗುತ್ತು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಅದರ ಬದಲು ನೆಲ್ಲಿದಡಿ ಗುತ್ತು ಚಾವಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ನೆಲ್ಲಿದಡಿ ಉಳಿಸಿ ಹೋರಾಟ ಸಮಿತಿ ತಿಳಿಸಿದೆ.
ಹೋರಾಟ ಸಮಿತಿ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಗುರುವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿರುವುದರಿಂದ ಪಾದಯಾತ್ರೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದರು. ನೆಲ್ಲಿದಡಿಗುತ್ತು ಗಡಿಪ್ರಧಾನರಾದ ಲಕ್ಷ್ಮಣ ಚೌಟ, ಮುಖಂಡರಾದ ಅಶ್ವಿನ್ ಶೆಟ್ಟಿ ಹಾಗೂ ಶರತ್ ಶೆಟ್ಟಿ ಉಪಸ್ಥಿತರಿದ್ದರು.