ಪುತ್ತೂರು: ಪುತ್ತೂರು ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶುಕ್ರವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಯಿತು.
ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು.. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನವಾಗಿದೆ. ಮೀನ ಸಂಕ್ರಮಣ ದಿನ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸೂರ್ಯನಕಿರಣಗಳು ಮುಂಜಾನೆಯಲ್ಲಿ ಸ್ಪರ್ಶಿಸುವ ರಾಜ್ಯದ ಎಕೈಕ ದೇವಸ್ಥಾನ ಇದಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀಪ್ರಸಾದ್ ಬೆಟ್ಟ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.