ಮಾ.16 : ಗೋ ಆಧಾರಿತ ಕೃಷಿ ಬಗ್ಗೆ ಜಾಗೃತಿ, ಗೋ ರಕ್ಷಣೆಗಾಗಿ ನಂದಿ ರಥಯಾತ್ರೆ ಪುತ್ತೂರಿಗೆ ಆಗಮನ | ನೀನ್ಯಾರಿಗಾದೆಯೋ ಎಲೆ ಮಾನವ ಪುಣ್ಯ ಕೋಟಿಯ ನೃತ್ಯರೂಪಕ ಪ್ರದರ್ಶನ

ಪುತ್ತೂರು: ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ಪುತ್ತೂರು ನಂದಿ ರಥಯಾತ್ರೆ ಸಂಚಾಲನ ಸಮಿತಿ ವತಿಯಿಂದ ನಂದಿ ರಥ ಯಾತ್ರೆ ಮಾ.16 ರಂದು ಪುತ್ತೂರಿಗೆ ಆಗಮಿಸಲಿದೆ ಎಂದು ನಂದಿ ರಥಯಾತ್ರೆಯ ಸಂಚಾಲನ ಸಮಿತಿ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಸಂಜೆ 4 ಗಂಟೆಗೆ ದರ್ಬೆ ವೃತ್ತದಿಂದ ನಂದಿ ರಥಯಾತ್ರೆಗೆ  ಡಾ. ಸಚಿನ್ ಶಂಕರ್ ಹಾರಕೆರೆ ಚಾಲನೆ ನೀಡಲಿದ್ದಾರೆ. ಬಳಿಕ ರಥಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬಳಿಕ ದೇವರಮಾರು ಗದ್ದೆಯಲ್ಲಿ ಸಂಜೆ 5 ರಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದು, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ನಂದಿ ರಥಯಾತ್ರೆಯಲ್ಲಿ ಗೋ ಉತ್ಪನ್ನಗಳ ಮಾರಾಟ ಮಳಿಗೆಯೂ ಇರಲಿದೆ. ಗೋಮಯ ಹಣತೆ ಕಿಟ್ ಲಭ್ಯವಿದ್ದು, ಮುಂದೆ ಏ.5 ರಂದು ನಡೆಯುವ ರಾಮ ನವಮಿಯಂದು ಆ ಹಣತೆಯನ್ನು ಮನೆಯಲ್ಲಿ ಬೆಳಗಿಸುವಂತೆ ಅವರು ವಿನಂತಿಸಿದರು.

 
 

ಸಮಾರಂಭದಲ್ಲಿ ಸಾವಯವ ಕೃಷಿಗೆ ಪೂರಕವಾಗಿ ದೇಶಿ ತಳಿಯನ್ನು ರಕ್ಷಿಸುವ ಮೂಲಕ ಹೈನುಗಾರಿಕೆ ನಡೆಸುತ್ತಿರುವರನ್ನು ಸಮಿತಿಯಿಂದ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಗಳಿಂದ ನೀನ್ಯಾರಿಗಾದೆಯೋ ಎಲೆ ಮಾನವ ಎಂಬ ಪುಣ್ಯ ಕೋಟಿಯ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಗೋಸೇವಾ ಗತಿವಿಧಿ ಕರ್ನಾಟಕ ಸಮಿತಿಯ ಪ್ರಕಾಶ್ಚಂದ್ರ ರೈ ಕೈಕಾರ, ನಂದಿ ರಥಯಾತ್ರೆ ಸಂಚಾಲನ ಸಮಿತಿ ಕಾರ್ಯ ದರ್ಶಿ ದಿನೇಶ್ ಪಂಜಿಗ, ಕೋಶಾಧಿಕಾರಿ ಪ್ರಸನ್ನ ಮಾರ್ತ, ಸದಸ್ಯೆ ವಸಂತಲಕ್ಷ್ಮೀ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top