ಕಾಸರಗೋಡು : ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕುಂಬಳೆ ಠಾಣಾ ವ್ಯಾಪ್ತಿಯ ಕಯ್ಯಾರ್ ಮಂಡಕಾವು ಎಂಬಲ್ಲಿ ಪತ್ತೆಯಾಗಿದೆ.
ಮಂಡಕಾಪುವಿನ ಶ್ರೇಯಾ (15) ಮತ್ತು ಆಟೋ ಚಾಲಕ ಪ್ರದೀಪ್ ( 42) ಎಂಬವರ ಮೃತದೇಹ ಪತ್ತೆಯಾದದ್ದು. ಮನೆಯಿಂದ ಅರ್ಧ ಕಿ. ಮೀ ದೂರದ ಕಾಡಿನಲ್ಲಿ ಆದಿತ್ಯವಾರ ಬೆಳಿಗ್ಗೆ 10.30 ರ ವೇಳೆಗೆ ಮೃತದೇಹ ಪತ್ತೆಯಾಗಿದೆ.
ನಾಪತ್ತೆಯಾದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದ್ದರು . ಆದರೆ ತಿಂಗಳಾಗುತ್ತಾ ಬಂದರೂ ಇಬ್ಬರ ಬಗ್ಗೆ ಯಾವುದೇ ಸುಳಿವು ಲಭಿಸದ ಹಿನ್ನಲೆಯಲ್ಲಿ ಶನಿವಾರದಿಂದ ಪೊಲೀಸರು ಹಾಗೂ ಸ್ಥಳೀಯರು ಮನೆ ಪರಿಸರದ ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದು, ಇಬ್ಬರ ಮೃತದೇಹ ಒಂದೇ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಸ್ಥಳದಲ್ಲಿ ಎರಡು ಮೊಬೈಲ್ ಫೋನ್ , ಒಂದು ಕತ್ತಿ ಪತ್ತೆಯಾಗಿದೆ.ಫೆಬ್ರವರಿ 11 ರ ರಾತ್ರಿಯಿಂದ ಶ್ರೇಯಾ ದಿಢೀರ್ ನಾಪತ್ತೆಯಾಗಿದ್ದಳು. ಇದರ ಜೊತೆಗೆ ಪ್ರದೀಪ್ ನಾಪತ್ತೆಯಾಗಿದ್ದು, ಇಬ್ಬರು ಪರಾರಿಯಾಗಿರಬಹುದೆಂದು ಶಂಕಿಸಲಾಗಿತ್ತು.
ಮೊಬೈಲ್ ಟವರ್ ಕೇಂದ್ರೀಕರಿಸಿ ಮನೆ ಪರಿಸರ ಕಾಡು ಹಾಗೂ ಮನೆ ಕೇಂದ್ರೀಕರಿಸಿ ತನಿಖೆ ನಡೆಸಿದ್ದರು. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು. ಶ್ರೇಯಾ ಸ್ಥಳೀಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು.