ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಸಂಬಂಧಿಸಿ ಪೋಷಕರಿಗೆ ಕಾರ್ಯಾಗಾರ ಗುರುವಾರ ನಡೆಯಿತು.
ವಿದ್ಯಾಭಾರತಿ ಕ್ಷೇತ್ರೀಯ ಶಿಶುಶಿಕ್ಷಣ ಸಹಪ್ರಮುಖರಾದ ತಾರಾ ಕಾಳಿಚರಣ್ ಬೆಂಗಳೂರು ಶಾಲಾ ಪೂರ್ವ ಪ್ರಾಥಮಿಕ, ಒಂದನೇ ಹಾಗೂ 2ನೇ ತರಗತಿ ಪೋಷಕರೊಂದಿಗೆ ಮಾತನಾಡಿ, ಸೊನ್ನೆಯಿಂದ 9 ವರ್ಷದ ವರೆಗಿನ ಮಗುವಿನ ಬೆಳವಣಿಗೆಯಲ್ಲಿ ಮನೆ, ಶಾಲೆ, ಸಮಾಜ ಪ್ರಮುಖ ಪಾತ್ರ ವಹಿಸುತ್ತಿದ್ದು ಮನೆ ಮತ್ತು ಶಾಲೆ ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭ ಮಗು ನೋಡಿ ಕಲಿಯುವ ಸಂಗತಿಗಳೇ ಅತೀ ಹೆಚ್ಚಾಗಿರುವುದರಿಂದ ಹಿರಿಯರಾದ ನಾವೇ ನಿರಂತರ ನಮ್ಮನ್ನು ಕಲಿಕೆಗೆ ತೆರೆದುಕೊಳ್ಳಬೇಕು. ಆದ್ದರಿಂದ ಚಟುವಟಿಕೆ ಪ್ರಧಾನ ಕಲಿಕೆಯ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ನಿರಂತರ ತರಬೇತಿ ಪಡೆಯುತ್ತಿರಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಎಂ, ಪ್ರೌಢವಿಭಾಗದ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಮೂರು ವಿಭಾಗದ ಮಕ್ಕಳಿಂದ ಶಬ್ದ ಮತ್ತು ವಾಸನಾ ಗ್ರಹಿಕೆ ಹಾಗೂ ಅಭಿವ್ಯಕ್ತಿ ಅಕ್ಷರಗಳಿಂದ ಪದ ರಚನೆ, ದೈಹಿಕ ಆರೋಗ್ಯ ಸಂಬಂಧೀ ಚಟುವಟಿಕೆಗಳ ಪ್ರಾತ್ಯಕ್ಷಿಕೆಗಳು ಪ್ರದರ್ಶಿಸಲ್ಪಟ್ಟವು.