ಪುತ್ತೂರು: ಪುತ್ತೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಮುಂಡೂರಿನಲ್ಲಿ ಜಿಲ್ಲೆಯ ಎರಡನೇ ಸೆನ್ಸಾರ್ ಆರ್ ಟಿಒ ಟ್ರ್ಯಾಕ್ ನಿರ್ಮಾಣವಾಗಲಿದ್ದು ಇದಕ್ಕಾಗಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಮುಂಡೂರು ಗ್ರಾಮದಲ್ಲಿ ಸುಮಾರು 5.40 ಎಕ್ರೆ ಜಾಗದಲ್ಲಿ ಈ ಬೃಹತ್ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಮತ್ತು ಚಾಲನ ತರಬೇತಿ ಕೇಂದ್ರ ಇಲ್ಲಿ ನಿರ್ಮಾಣವಾಗಲಿದೆ. ಪುತ್ತೂರು ಶಾಸಕರ ಕನಸಿನ ಕೂಸಾದ ಈ ಯೋಜನೆಯನ್ನು ಶಾಸಕರೇ ಸ್ವಯಂ ಮುತುವರ್ಜಿವಹಿಸಿ ಪುತ್ತೂರಿಗೆ ತರುವಲ್ಲಿ ಯಸಶ್ವಿಯಾಗಿದ್ದರು. ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಅಲೆವೂರು ಗ್ರಾಮದಲ್ಲಿ ನಿರ್ಮಾಣವಾಗಬೇಕಿದ್ದ ಈ ಟ್ರ್ಯಾಕ್ ಅಲ್ಲಿ ಜಾಗದ ಕೊರತೆಯಿಂದ ಮತ್ತು ಅಲ್ಲಿ ಗುರುತಿಸಲಾಗಿದ್ದ ಜಾಗವು ಡೀಮ್ಡ್ ಫಾರೆಸ್ಟ್ ಆಗಿರುವ ಕಾರಣ ಅಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. ಈ ವಿಚಾರ ಶಾಸಕ ಅಶೋಕ್ ರೈ ಗಮನಕ್ಕೆ ಬಂದ ತಕ್ಷಣ ಅದನ್ನು ಪುತ್ತೂರಿಗೆ ವರ್ಗಾಯಿಸಿದ್ದರು. ತಾನೇ ಖುದ್ದಾಗಿ ಮುಂಡೂರು ಗ್ರಾಮಕ್ಕೆ ಭೇಟಿ ನೀಡಿ ಜಾಗವನ್ನು ಹುಡುಕಿದ್ದರು. ಇದೀಗ ಅದೇ ಜಾಗದಲ್ಲಿ ಜಿಲ್ಲೆಯ ಎರಡನೇ ಸೆನ್ಸಾರ್ ಆರ್ ಟಿಒ ಟ್ರ್ಯಾಕ್ ನಿರ್ಮಾಣವಾಗಲಿರುವುದು ಅಭಿವೃದ್ದಿ ಹೊಂದುತ್ತಿರುವ ಪುತ್ತೂರಿನ ಹಿರಿಮೆಯನ್ನು ಹೆಚ್ಚಿಸಿದೆ.
ನಾಲ್ಕು ತಾಲೂಕುಗಳ ಕೇಂದ್ರ ಸ್ಥಾನ
ಮುಂಡೂರಿನಲ್ಲಿ ನಿರ್ಮಾಣವಾಗಲಿರುವ ಸೆನ್ಸಾರ್ ಆರ್ಟಿಒ ಟ್ರ್ಯಾಕ್ ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ವಿಟ್ಲ ಭಾಗದ ಪ್ರಮುಖ ಕೇಂದ್ರವಾಗಲಿದೆ. ಈ ಹಿಂದೆ ಉಳ್ಳಾಲದಲ್ಲಿರುವ ಸೆನ್ಸಾರ್ ಆರ್ಟಿಒ ಕೇಂದ್ರಕ್ಕೆ ಈ ತಾಲೂಕಿನ ವಾಹನ ಚಾಲಕ ಮಾಲಕರು ತೆರಳಬೇಕಿತ್ತು. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿಯೇ ಎಲ್ಲಾ ಸೌಲಭ್ಯಗಳು ದೊರೆಯಲಿದೆ.
ಶೀಘ್ರ ಕಾಮಗಾರಿ ಪ್ರಾರಂಭ
ಇದರ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಸರಕಾರದಿಂದ ಮೊದಲ ಕಂತಿನ ಅನುದಾನ ೮ ಕೋಟಿ ಬಿಡುಗಡೆಯಾಗಿದೆ. ಕಾಮಗಾರಿ ಸಮರೋಪಾದಿಯಲ್ಲಿ ನಡೆದು ಶೀಘ್ರವೇ ಲೋಕಾರ್ಪಣೆ ಕಾರ್ಯ ನಡೆಯಲಿದೆ. ಈ ಟ್ರ್ಯಾಕ್ ಪ್ರಾರಂಭವಾದಲ್ಲಿ ಸ್ಥಳೀಯವಾಗಿ 100 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದ್ದು , ಮುಂಡೂರು ಭಾಗದ ರಸ್ತೆಗಳ ಅಭಿವೃದ್ದಿಯಾಗಲಿದೆ. ದಿನವೊಂದಕ್ಕೆ ನೂರಾರು ವಾಹನಗಳು ಈ ಭಾಗಕ್ಕೆ ಸಂಚಾರ ಮಾಡಲಿರುವ ಕಾರಣ ಮುಂಡೂರು ಗ್ರಾಮ ಅಭಿವೃಧ್ದಿಯಾಗಲಿದೆ.