ಸರಕಾರದ ಮೇಲೆ ದಾಳಿ ಮಾಡಲು ವಿಪಕ್ಷದ ಬಳಿಯಿದೆ ಸಾಕಷ್ಟು ಅಸ್ತ್ರ
ಬೆಂಗಳೂರು: ಮಾರ್ಚ್ 3ರಿಂದ ರಾಜ್ಯ ಬಜೆಟ್ ಅಧಿವೇಶನದ ಆರಂಭವಾಗುತ್ತಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಹಲವಾರು ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡು ವಿಪಕ್ಷ ಬಿಜೆಪಿ ಸಜ್ಜಾಗಿದೆ. ಈ ಸಂಬಂಧ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗಿದೆ.
ಮುಂಬರುವ ಬಜೆಟ್ ಅಧಿವೇಶನ ಕುರಿತು ಮಹತ್ವದ ಚರ್ಚೆ ನಡೆಸಲಾಗಿದ್ದು. ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದು, ಚರ್ಚೆಗೆ ಒಳಪಡಿಸುವ ವಿಷಯಗಳು ಹಾಗೂ ನಿಲುವಳಿ ಸೂಚನೆಯ ಮಂಡನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಜನವಿರೋಧಿ ನೀತಿಗಳನ್ನು ಬಹಿರಂಗಪಡಿಸಲು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಸದನದಲ್ಲಿ ಬಲವಾದ ಹೋರಾಟ ನಡೆಸಲಾಗುವುದು. ಈ ಕುರಿತು ಸರ್ವ ಸದಸ್ಯರು ತೀವ್ರ ಚರ್ಚೆ ನಡೆಸಿ, ಸರ್ಕಾರದ ಅಸಾಮರ್ಥ್ಯ ವಿರುದ್ಧ ರಾಜ್ಯದ ಜನತೆಗಾಗಿ ನಿಲುವು ಕೈಗೊಳ್ಳಲು ನಿರ್ಧರಿಸಲಾಗಿದೆ. ಜೆಡಿಎಸ್ ಸದಸ್ಯರೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು. ಹದಗೆಟ್ಟ ಕಾನೂನು ವ್ಯವಸ್ಥೆ, ಅನುದಾನ ಕೊರತೆ, ಬೆಲೆ ಏರಿಕೆ, ಮೈಕ್ರೊ ಫೈನಾನ್ಸ್ ಕಿರುಕುಳ, ಮುಗಿಯದ ವಕ್ಫ್ ವಿವಾದ ಸೇರಿದಂತೆ ಹೋರಾಟ ಮಾಡಲು ವಿಪಕ್ಷದ ಬಳಿ ಸಾಕಷ್ಟು ಅಸ್ತ್ರಗಳಿವೆ.