ಬೆಳ್ತಂಗಡಿ : ಪತ್ನಿಗೆ ಪತಿ ಹಾಗೂ ಅತ್ತೆ, ನಾದಿನಿಯ ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎರ್ಮಾಳಪಳಿಕೆ ಎಂಬಲ್ಲಿ ನಡೆದಿದೆ.
ಮಿತ್ತಬಾಗಿಲು ಜಿ.ನಗರ ನಿವಾಸಿ ಕೂಲಿ ಕಾರ್ಮಿಕ ಹಮೀದ್ ಎಂಬವರ ಪುತ್ರಿಯನ್ನು ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್ಪಲ್ಕೆ ನಿವಾಸಿ ಫಾರೂಕ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಹಲವಾರು ಕನಸುಗಳನ್ನು ಹೊತ್ತು ಪತಿ ಮನೆ ಸೇರಿದ ಆಕೆಗೆ ಅಲ್ಲಿ ಪತಿಯ ನಿರಂತರ ಮಾನಸಿಕ ದೈಹಿಕ ಕಿರುಕುಳ, ಅತ್ತೆ ಮತ್ತು ನಾದಿನಿಯ ಮಾನಸಿಕ ಹಿಂಸೆಯಿಂದ ಬೇಸತ್ತಿದ್ದರು. ಇದೀಗ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ತಾಯಿ ಮತ್ತು ಸಹೋದರಿಯ ಒಪ್ಪಿಗೆ ಇಲ್ಲದೆ ಆತ ಆಕೆಗೆ ಯಾವುದೇ ಅನುಕೂಲಗಳನ್ನು ನೀಡುತ್ತಿರಲಿಲ್ಲ. ಖರ್ಚಿಗೆ ಒಂದು ರೂಪಾಯಿ ದುಡ್ಡೂ ನೀಡುತ್ತಿರಲಿಲ್ಲ. ಅಲ್ಲದೆ ಏನಾದರೊಂದು ಕಾರಣ ಸೃಷ್ಟಿಸಿ ನಿತ್ಯ ಜಗಳವಾಡುವುದು. ಅದಕ್ಕೆ ತಾಯಿ ಮತ್ತು ಆತನ ಸಹೋದರಿ (ನಾದಿನಿ) ಕುಮ್ಮಕ್ಕು ನೀಡುತ್ತಿದ್ದುದರಿಂದ ಆಕೆ ಮಾನಸಿಕವಾಗಿ ಜರ್ಜರಿತಗೊಂಡು ಕೊನೇಗೆ ಈ ತೀರ್ಮಾನಕ್ಕೆ ಬಂದಿದ್ದರೆಂದು ತಿಳಿದುಬಂದಿದೆ. ಈ ಎಲ್ಲ ಬೆಳವಣಿಗೆಯಿಂದ ತವರು ಮನೆಯವರೂ ಬೇಸತ್ತಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಪತಿ ಹೆಲ್ಪ್ಲೈನ್ ಹೆಸರಿನ ಸಮಾಜ ಸೇವಾ ಗುಂಪುಗಳಲ್ಲಿ ಗುರುತಿಸಿಕೊಂಡವನಾಗಿದ್ದು ತನ್ನ ಪತ್ನಿಗೇ ಈ ರೀತಿ ಹಿಂಸೆ ನೀಡುತ್ತಿದ್ದಾನೆ.