ಪುತ್ತೂರು : ಪುತ್ತೂರು- ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು- ಉಪ್ಪಿನಂಗಡಿ ಮಧ್ಯೆ ಬಾಕಿಯಾಗಿರುವ ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡಿದೆ.
ಪುತ್ತೂರು- ಉಪ್ಪಿನಂಗಡಿ ಕಾಮಗಾರಿ ಮಧ್ಯೆಯೇ ಹೆದ್ದಾರಿಯಲ್ಲಿ ಬರುವ ಹಾರಾಡಿ ರೈಲ್ವೆ ಮೇಲ್ಸೇತುವೆಯನ್ನು ಹೊಸದಾಗಿ ಮರು ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಂತಿಮವಾಗಲಿದೆ.
ಹಾರಾಡಿ ರೈಲ್ವೆ ಮೇಲ್ಸೇತುವೆ ಮರು ನಿರ್ಮಾಣಕ್ಕೆ ಸುಮಾರು 8 ಕೋಟಿ ರೂ. ಮೊತ್ತವನ್ನು ಅಂದಾಜಿಸಲಾಗಿದೆ. ಬಳಿಕ ಪುತ್ತೂರು ನಗರದ ಬೊಳುವಾರಿನ ಆಂಜನೇಯ ಮಂತ್ರಾಲಯದ ಬಳಿಯಿಂದ ಚತುಷ್ಪಥ ಕಾಮಗಾರಿ ಆರಂಭವಾಗಲಿದೆ.
ರೈಲ್ವೆ ಯೋಜನೆ
ಬೊಳುವಾರು ಬಳಿಯ ಹಾರಾಡಿಯಲ್ಲಿ ರೈಲ್ವೆ ಮೇಲ್ಸೇತುವೆ ಹಾದು ಹೋಗಿದ್ದು, ಅದರೆ ಕೆಳಗೆ ಹೆದ್ದಾರಿ ಅಗಲೀಕರಣ ಮಾಡಬೇಕಾದರೆ ರೈಲ್ವೆ ಮೇಲ್ಸೇತುವೆಯನ್ನು ಮರು ನಿರ್ಮಿಸಬೇಕಿದೆ. ಈ ಯೋಜನೆ ಮಂಜೂರಾಗದೆ ಇದ್ದಲ್ಲಿ ಮೇಲ್ಸೇತುವೆಯ ಭಾಗವನ್ನು ಬಿಟ್ಟು ರಸ್ತೆ ಅಗಲೀಕರಣ ಮಾಡಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಅಪೂರ್ಣಗೊಳ್ಳುತ್ತದೆ.