119 ಕೆಜಿ ಗಾಂಜಾ, ಕಾರು, ಟೆಂಪೋ ವಶ: ನಾಲ್ವರ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು 119 ಕೆಜಿ ಗಾಂಜಾ ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೊಹಿಯುದ್ದೀನ್ ಶಬ್ಬೀರ್ (38), ಮಹಾರಾಷ್ಟ್ರದ ಥಾಣೆಯ ಮಹೇಶ್ ದ್ವಾರಕಾನಾಥ್ ಪಾಂಡೆ (30), ಕೇರಳದ ಅಜಯ್ ಕೃಷ್ಣನ್ (30) ಮತ್ತು ಹರಿಯಾಣದ ಜೀವನ್ ಸಿಂಗ್ (35) ಸೆರೆಯಾಗಿರುವ ಆರೋಪಿಗಳು.

ಆರೋಪಿಗಳಿಂದ ಆಲ್ಟೋ ಕಾರು ಹಾಗೂ ಟೆಂಪೋ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವಾಹನಗಳನ್ನು ತಡೆದಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದಿಂದ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದರು. ಆಲ್ಟೋ ಕಾರಿನಲ್ಲಿ ಒಟ್ಟು 34 ಕೆಜಿ ಗಾಂಜಾ ಪತ್ತೆಯಾಗಿದ್ದು, 407 ಟೆಂಪೋದಲ್ಲಿ 85 ಕೆಜಿ ಗಾಂಜಾವನ್ನು 40 ಪ್ಯಾಕ್‌ಗಳೊಂದಿಗೆ ಮೀನಿನ ಟ್ರೇಗಳಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಾಹನಗಳು ಕ್ರಮವಾಗಿ ಆಂಧ್ರಪ್ರದೇಶ ಮತ್ತು ಕೇರಳದ ನೋಂದಣಿಯನ್ನು ಹೊಂದಿದ್ದವು.

































 
 

ನಕ್ಸಲ್ ಪೀಡಿತ ಪ್ರದೇಶವಾದ ವಿಶಾಖಪಟ್ಟಣಂ, ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು, ನಂತರ ಕರ್ನಾಟಕ, ಕೇರಳ ಹಾಗೂ ಇತರ ರಾಜ್ಯಗಳಿಗೆ ಸಾಗಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಬ್ಬೀರ್ ಪ್ರಮುಖ ಆರೋಪಿಯಾಗಿದ್ದು, ಆತನ ವಿರುದ್ಧ ಕೊಲೆ, ಗಾಂಜಾ ಸಾಗಾಟ, ಜಾನುವಾರು ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ 12 ಪ್ರಕರಣಗಳಿವೆ. ಈ ಹಿಂದೆ 23 ಕೆಜಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಅಜಯ್ ಕೃಷ್ಣನ್ ವಿರುದ್ಧ ಆರು ಅಪರಾಧಗಳಿದ್ದು, ಮಹೇಶ್ ಪಾಂಡೆ 200 ಕೆಜಿ ಗಾಂಜಾ ಹೊಂದಿದ್ದಕ್ಕಾಗಿ ಮತ್ತು ಜೀವನ್ ಸಿಂಗ್ 65 ಕೆಜಿಗೆ ಹೊಂದಿದ್ದಕ್ಕೆ ಠಾಣೆಗಳಲ್ಲಿ ಬಂಧಿತರಾಗಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top