ಅರಿವಳಿಕೆ ಸ್ಪ್ರೇ ಮಾಡಿ 30 ಪವನ್ ಆಭರಣ ದರೋಡೆ
ಮೂಡುಬಿದಿರೆ : ಹಾಡಹಗಲೇ ಮನೆಗೆ ನುಗ್ಗಿ ಮನೆಯಲ್ಲಿದ್ದ ಬಾಲಕಿಯ ಪ್ರಜ್ಞೆ ತಪ್ಪಿಸಿ ಸುಮಾರು 30 ಪವನ್ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಿನ್ನೆ ಮೂಡುಬಿದಿರೆ ಸಮೀಪ ಸಂಭವಿಸಿದೆ. ಮೂಡುಬಿದಿರೆ ತಾಲೂಕಿನ ಅಳಿಯೂರಿನ ನೇಲಡೆಯ ಪ್ರಶಾಂತ್ ಜೈನ್ ಎಂಬವರ ಮನೆಗೆ ಹಾಡಹಗಲೇ ನುಗ್ಗಿದ ದರೋಡೆಕೋರರು ಮೂರೂವರೆ ಲಕ್ಷ ರೂ. ಮೌಲ್ಯದ ಸುಮಾರು 30 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಪ್ರಶಾಂತ್ ಜೈನ್ ಮತ್ತು ಅವರ ಪುತ್ರ ಮೂಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ತೆರಳಿದ್ದರು. ಅವರ ಪತ್ನಿ ಶಿರ್ತಾಡಿಗೆ ಹೋಗಿದ್ದರು. ಅವರ ಪುತ್ರಿಯ ಹೊರತಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಭಾನುವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರರು ಪ್ರಶಾಂತ್ ಅವರ ಪುತ್ರಿಯ ಬಾಯಿಯನ್ನು ಒತ್ತಿ ಹಿಡಿದು, ಅರಿವಳಿಕೆ ಸ್ಪ್ರೇ ಮಾಡಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಚಿನ್ನಾಭರಣಗಳನ್ನು ದೋಚಿದ್ದಾರೆ. ಸುಮಾರು 2 ತಾಸುಗಳ ಬಳಿಕ ನೆರೆಮನೆಯ ಸಂಬಂಧಿಕ ಮಹಿಳೆ ಬಂದಿದ್ದು, ಆಗ ಎಚ್ಚರಗೊಂಡಿದ್ದ ಪ್ರಶಾಂತ್ ಅವರ ಪುತ್ರಿ ಮಹಿಳೆಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಶ್ವಾನದಳ, ಪ್ರಾಯೋಗಿಕ ವಿಧಿವಿಜ್ಞಾನ ವಿಭಾಗದವರೂ ಭೇಟಿ ನೀಡಿದ್ದಾರೆ. ಮನೆಯವರ ಓಡಾಟ ಗಮನಿಸಿದ್ದ ಪರಿಚಿತರೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.