ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : 18 ಪ್ರಯಾಣಿಕರು ಸಾವು

ಮಹಾಕುಂಭಮೇಳಕ್ಕೆ ಹೋಗುವ ವಿಶೇಷ ರೈಲು ಹತ್ತಲು ನೂಕುನುಗ್ಗಲು ಉಂಟಾದಾಗ ಸಂಭವಿಸಿದ ದುರಂತ

ಹೊಸದಿಲ್ಲಿ: ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿ 11 ಜನರಿಗೆ ಗಾಯಗಳಾಗಿದ್ದು, ಅವರನ್ನು ಎಲ್ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್​ಪಿಎಫ್ ಸಿಬ್ಬಂದಿ ತಕ್ಷಣ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೃತರಲ್ಲಿ ಐವರು ಮಕ್ಕಳು, 9 ಮಹಿಳೆಯರು ಸೇರಿದ್ದಾರೆ.
ನವದೆಹಲಿ ನಿಲ್ದಾಣದಿಂದ ಪ್ರಯಾಗ್​ರಾಜ್​ ಮಹಾಕುಂಭಮೇಳಕ್ಕೆ ರೈಲ್ವೆ ಇಲಾಖೆ ಎರಡು ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಗ್​ರಾಜ್​ಗೆ ತೆರಳಲು ವಿವಿಧ ರಾಜ್ಯಗಳಿಂದ ಬಂದಿದ್ದ ಬಂದಿದ್ದ ನೂರಾರು ಪ್ರಯಾಣಿಕರು ನವದೆಹಲಿ ರೈಲು ನಿಲ್ದಾಣದೊಳಗೆ ನುಗ್ಗಿದ್ದಾರೆ. ಪ್ಲಾಟ್​ಫಾರ್ಮ್​ ನಂಬರ್ 14 ಮತ್ತು 15ರಲ್ಲಿ ನಿಂತಿದ್ದ ಪ್ರಯಾಗ್​​​ರಾಜ್ ಹೊರಡುವ​ ವಿಶೇಷ ರೈಲಿನ ಜನರಲ್ ಬೋಗಿಗೆ ಹತ್ತುವಾಗ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತವಾಗಿದೆ. ರೈಲು ಹತ್ತಲು ಒಮ್ಮೆಲೆ ಜನರು ಧಾವಿಸಿದಾಗ ಕೆಲವರು ಆಯತಪ್ಪಿ ಬಿದ್ದಿದ್ದಾರೆ. ಇದು ಕಾಲ್ತುಳಿತ ಎಂಬ ವದಂತಿ ಕ್ಷಣಾರ್ಧದಲ್ಲಿ ಹರಡಿ ಕೋಲಾಹಲ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಎನ್​ಡಿಆರ್​ಎಫ್​ ಸಿಬ್ಬಂದಿ, ರೈಲ್ವೆ, ದೆಹಲಿ ಪೊಲೀಸ್​ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದರು. ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್​ಡಿಆರ್​ಎಫ್​ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಸಂತಾಪ

































 
 

ಕಾಲ್ತುಳಿತ ದುರಂತದ ವಿಷಯ ತಿಳಿದು ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆ ನಾವಿರುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ತೊಂದರೆಗೊಳಗಾದವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ನವದೆಹಲಿ ರೈಲು ನಿಲ್ದಾಣದಲ್ಲಿ ದುರಂತ ಘಟನೆ ನಡೆದಿದೆ. ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲಿ ಕಾಲ್ತುಳಿತದಿಂದ ಉಂಟಾದ ಜೀವಹಾನಿಯಿಂದ ತುಂಬ ನೋವಾಗಿದೆ. ಮೃತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ತ್ವರಿತವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top