ಪುತ್ತೂರು: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪುತ್ತೂರು ಸಾಂತ್ವನ ಕೇಂದ್ರ ಕಟ್ಟಡದ ದುರಸ್ತಿ ಕಾಮಗಾರಿಗೆ ಸೋಮವಾರ ಚಾಲನೆ ದೊರಕಿದೆ.
ಪುತ್ತೂರಿನ ಶಾಸಕರ ಕಚೇರಿಯ ಪಕ್ಕದಲ್ಲಿರುವ ನಗರಸಭಾ ಸುಪರ್ದಿಗೆ ಒಳಪಟ್ಟಿರುವ ಸಾಂತ್ವನ ಕೇಂದ್ರವು ಈ ಹಿಂದೆ ಅಕ್ಷರ ಕರಾವಳಿ ಸದನವಾಗಿ ನಿರ್ಮಾಣಗೊಂಡಿತ್ತು. ಸಾಕ್ಷರತಾ ಯೋಜನೆ ಪೂರ್ಣಗೊಂಡ ಬಳಿಕ ಅದನ್ನು ಸಾಂತ್ವನ ಕೇಂದ್ರಕ್ಕೆ ನೀಡಲಾಗಿತ್ತು. ಬಳಿಕ ಹಲವು ವರ್ಷಗಳ ಕಾಲ ಇಲ್ಲಿ ಸಾಂತ್ವನ ಕೇಂದ್ರವು ನಡೆಸಲ್ಪಡುತ್ತಿತ್ತು. ಬಳಿಕ ಹಂಚಿನ ಈ ಕಟ್ಟಡವು ನಾದುರಸ್ತಿಗೊಂಡ ಹಿನ್ನಲೆಯಲ್ಲಿ ಸಾಂತ್ವನ ಕೇಂದ್ರವನ್ನು ಸಮೀಪದ ತಾಲೂಕು ಪಂಚಾಯತ್ ಕಚೇರಿಯ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಕಟ್ಟಡವನ್ನು ದುರಸ್ಥಿ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇರಿಸಲಾಗಿತ್ತು ಆದರೆ ಇದರ ದುರಸ್ತಿಗೆ ಅನುದಾನ ಮೀಸಲಿಟ್ಟಿರಲಿಲ್ಲ. ಕಟ್ಟಡದ ಕೊರತೆ ಇರುವ ಕಾರಣ ಸಾಂತ್ವನ ಕೇಂದ್ರವನ್ನು ತಾಲೂಕು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಸೂಕ್ತ ಕೊಠಡಿಯ ಅವಶ್ಯಕತೆ
ಸಾಂತ್ವನ ಕೇಂದ್ರಕ್ಕೆ ಸೂಕ್ತ ಕೊಠಡಿಯ ಅವಶ್ಯಕತೆ ಬೇಕಾಗುತ್ತದೆ. ನೊಂದವರಿಗೆ ಸಾಂತ್ವನದ ಜೊತೆಗೆ ಸಾಮಾಜಿಕ ನ್ಯಾಯವನ್ನು ಕೊಡುವಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಗುಪ್ತವಾಗಿ ಮಾತುಕತೆ ನಡೆಸಬೇಕಾಗುತ್ತದೆ. ಈ ಮಾತುಕತೆಗೆ ಸೂಕ್ತವಾದ ಕೊಠಡಿಯ ಅವಶ್ಯಕತೆಯೂ ಬೇಕಾಗುತ್ತದೆ., ಸಾರ್ವಜನಿಕವಾಗಿ ಹೇಳಲಾಗದ ಕೆಲವೊಂದು ವಿಚಾರಗಳನ್ನು ಸಾಂತ್ವನ ಕೇಂದ್ರದಲ್ಲಿರುವವರ ಜೊತೆ ಗೌಪ್ಯವಾಗಿ ಮಾತನಾಡಬೇಕಾಗುತ್ತದೆ. ಈ ಹಿಂದೆ ಕಟ್ಟಡದಲ್ಲಿ ಈ ವ್ಯವಸ್ಥೆ ಇತ್ತು. ಆದರೆ ಕಾಲಕ್ರಮೇಣ ಕಟ್ಟಡ ಶಿಥಿಲಗೊಂಡ ಕಾರಣ ಅಲ್ಲಿಂದ ತಾಲೂಕು ಪಂಚಾಯತ್ ಕಟ್ಟಡದ ಹಾಲ್ಗೆ ಸ್ಥಳಾಂತರ ಮಾಡಲಾಗಿತ್ತು.
ಸಾಂತ್ವನ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಮತ್ತು ಈಗ ಇರುವ ಕಟ್ಟಡದಲ್ಲಿ ಸಔಲಭ್ಯದ ಕೊರತೆ ಇರುವ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ನಗರಸಭಾ ಅನುದಾನದಲ್ಲಿ ಕಟ್ಟಡವನ್ನು ದುರಸ್ಥಿ ಮಾಡಿ ಬಳಕೆಗೆ ಯೋಗ್ಯ ರೀತಿಯಲ್ಲಿ ಕಟ್ಟಡದ ನವೀಕರಣ ಮಾಡಬೇಕೆಂದು ಶಾಸಕ ಅಶೋಕ್ ರೈ ಸೂಚನೆ ನೀಡಿದ್ದರು.