ಪುತ್ತೂರು:ಬನ್ನೂರು ಶಾಲಾ ಬಳಿಯ ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶ್ರೀಶನಿಪೂಜೆ ಶನಿವಾರ ನಡೆಯಿತು.
ಅರ್ಚಕ ಹರೀಶ್ ಶಾಂತಿಯವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿಹೋಮ, ಶ್ರೀ ಶನೀಶ್ವರ ದೇವರ ಪೂಜೆ ಆರಂಭ, ಮಧ್ಯಾಹ್ನ ಶ್ರೀದೇವರಿಗೆ ಮಹಾ ಮಂಗಳಾರತಿ, ಶನೀಶ್ವರ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಶ್ರೀ ಮಹಾಬಲ ಸ್ವಾಮೀಜಿ, ನವಗ್ರಹಗಳಿಗೆ ಶನಿದೇವರು ಶ್ರೇಷ್ಠರು. ಯಾವ ದೈವ, ದೇವರನ್ನಾದರೂ ಭಕ್ತಿ, ಶ್ರದ್ಧೆಯಿಂದ ದೇವರ ಉಪಾಸನೆ ಮಾಡಿದಾಗ ಮಾತ್ರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಜನೆಯ ಮೂಲಕ ಭಗವಂತನಿಗೆ ಸಮರ್ಪಣೆ ಮಾಡುವ ಸುಲಭದ ದಾರಿಯಾಗಿದೆ. ಭಜನೆಗೆ ಎಲ್ಲಿಯೂ ನಿಷೇಧವಿಲ್ಲ. ಕಲಿಯುಗದಲ್ಲಿ ದೇವರನ್ನು ಮುಟ್ಟುವ ಸುಲಭದ ದಾರಿಯಾಗಿದೆ. ಭಗೀರಥ ಪ್ರಯತ್ನದಿಂದ ಬನ್ನೂರಿನ ಶನೀಶ್ವರ ಕ್ಷೇತ್ರ ಮುನ್ನಡೆಯುತ್ತಿದ್ದು ಧರ್ಮದರ್ಶಿಯವರ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ ಜಾಗೃತಿಯ ಜೊತೆಗೆ ಇಂದು ನಮ್ಮ ಧರ್ಮದ ಸಂಸ್ಕೃತಿಯನ್ನು ನೀಡುವ ಅನಿವಾರ್ಯತೆಯಿದೆ. ನೂರಾರು ಸವಾಲು, ಸಂಕಷ್ಟಗಳನ್ನು ಎದುರಿಸುವ ಸಂಕಲ್ಪ ಮಾಡಬೇಕಿದೆ. ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ ಸಂಸ್ಕಾರ ಬೆಳೆಸಬೇಕಾದ ಹೊಣೆ ತಾಯಂದಿರಲ್ಲಿದೆ ಎಂದರು.
ಶ್ರೀ ಶನೀಶ್ವರ ಸನ್ನಿಧಿಯ ಧರ್ಮದರ್ಶಿ ದಿನೇಶ್ ಸಾಲಿಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಕಳೆದ 20 ವರ್ಷಗಳಿಂದ ಶನೀಶ್ವರ ಸನ್ನಿಧಿಯಲ್ಲಿ ಪ್ರತಿ ಶನಿವಾರ ಪೂಜೆ, ಭಜನೆ ನಡೆಯುತ್ತಿದೆ. ಈಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಗಿದೆ. ಊರ, ಪರವೂರ ಸನ್ನಿಧಿಯಲ್ಲಿ ಪ್ರಾರ್ಥಿಸಿದ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುತ್ತಿದೆ ಎಂದರು.
ಅರ್ಚಕ ಹರೀಶ್ ಶಾಂತಿ, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಶನೀಶ್ವರ ಮಕ್ಕಳ ಕುಣಿತ ಭಜನಾ ತಂಡಕ್ಕೆ ತರಬೇತಿ ನೀಡುತ್ತಿರುವ ನಾಗೇಶ್, ಕಾರ್ತಿಕ್ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶರತ್ ಕುಮಾರ್, ಪ್ರಮೋದ್ ಕುಮಾರ್, ಗಣೇಶ್, ನವೀನ್ ಕುಮಾರ್ ಅತಿಥಿಗಳನ್ನು ಗೌರವಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ನವೀನ್ ಕುಮಾರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಬನ್ನೂರು ಶ್ರೀದೇವಿ ಯಕ್ಷಗಾನ ಕಲಾ ಸಂಘದಿಂದ ದಕ್ಷಯಜ್ಞ ಬಾರ್ಗವ ವಿಜಯ ಎಂಬ ಯಕ್ಷಗಾನ ನಡೆಯಿತು.