ಎಣ್ಣೆ-ಬತ್ತಿ ಇಲ್ಲದೆ ನಿರಂತರವಾಗಿ ನಾಲ್ಕೂವರೆ ದಶಕ ಉರಿಯುತ್ತಿದ್ದ ಮೂರು ದೀಪಗಳು
ಕಾರವಾರ: ದೇವಸ್ಥಾನವೊಂದರಲ್ಲಿ ಸುಮಾರು ನಾಲ್ಕೂವರೆ ದಶಕದಿಂದ ಎಣ್ಣೆ ಮತ್ತು ಬತ್ತಿ ಇಲ್ಲದೆ ನಿರಂತರವಾಗಿ ಉರಿಯುತ್ತಿದ್ದ ಮೂರು ದೀಪಗಳು ಹಠಾತ್ ನಂದಿಹೋಗಿದ್ದು, ಇದು ಯಾವುದೋ ಕೆಡುಕಿನ ಸೂಚನೆ ಎಂದು ಈ ಊರಿನ ಜನ ಭಯಭೀತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಎಣ್ಣೆ ಮತ್ತು ಬತ್ತಿ ಇಲ್ಲದೆ ಸತತ 46 ವರ್ಷಗಳಿಂದ ಹಗಲು-ರಾತ್ರಿ ನಿರಂತರವಾಗಿ ಉರಿಯುತ್ತಿದ್ದವು. ಕೆಲದಿನಗಳ ಹಿಂದೆ ಏಕಾಏಕಿ ಮೂರೂ ದೀಪಗಳು ಆರಿಹೋಗಿವೆ. ದೀಪಗಳು ಉರಿಯುತ್ತಿದ್ದಾಗ ನಿತ್ಯ ಜನರು ಇವುಗಳನ್ನು ನೋಡಲೆಂದೇ ದೇವಾಲಯಕ್ಕೆ ಬರುತ್ತಿದ್ದರು. ದೇವಾಲಯಕ್ಕೆ ದೀಪನಾಥೇಶ್ವರ ಎಂಬ ಹೆಸರೂ ಬಂದಿತ್ತು. ಆದರೆ ಈಗ ಏಕಾಏಕಿ ದೀಪಗಳು ಆರಿ ಹೋಗಿದ್ದರಿಂದ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ದೀಪಗಳು ಆರಿದರೆ ರಾಜ್ಯದ ರಾಜನಿಗೆ ಕೆಡಕು ಎಂಬ ನಂಬಿಕೆ ಇದೆ. ಹೀಗಾಗಿ ಈಗ ದೀಪ ಆರಿದ್ದರಿಂದ ರಾಜನಿಗೆ ಏನೋ ಕೆಡಕು ಕಾದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಅದು ಒಂದು ಇಡೀ ದಿನ ಉರಿದರೂ ಆರಿಲಿಲ್ಲ. ಇದರಿಂದ ಕುತೂಹಲಗೊಂಡ ಶಾರದಮ್ಮ ಒಂದು ವರ್ಷದ ಬಳಿಕ ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯತೊಡಗಿತು. 2ನೇ ದೀಪ ಹಚ್ಚಿದ 10-15 ದಿನಗಳ ನಂತರ 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪಸೇರಿ ಮೂರೂ ದೀಪಗಳು ನಿರಂತರವಾಗಿ ಉರಿಯ ತೊಡಗಿದವು.
ಬಳಿಕ ಈ ದೀಪಗಳ ಉಸ್ತುವಾರಿಯನ್ನು ಅರ್ಚಕ ವೆಂಕಟೇಶ್ ಎಂಬವರು ನೋಡಿಕೊಳ್ಳುತ್ತಿದ್ದರು. ಅವರು 14 ದಿನದ ಹಿಂದೆ ಮೃತಪಟ್ಟಿದ್ದಾರೆ. ಈ ಸೂತಕದ ಹಿನ್ನೆಲೆಯಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಬುಧವಾರ ದೇವಸ್ಥಾನದ ಬಾಗಿಲು ತೆರೆದಾಗ ಮೂರು ದೀಪಗಳು ಆರಿ ಹೋಗಿದ್ದವು. 1979ರಿಂದ 2025ರ ಫೆಬ್ರವರಿವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಆರಿ ಹೋಗಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಕೆಡುಕಾಗುವ ಭಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿಸಿ ಸಾರ್ವಜನಿಕರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದಾರೆ.