ಶರಣಾಗಿರುವ ನಕ್ಸಲ್ ರವೀಂದ್ರನ ಬಂದೂಕು ಎಂಬ ಶಂಕೆ
ಕಾರ್ಕಳ: ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮದ ತಿರುಗುಣಿಬೈಲು ಸಮೀಪ ಅರಣ್ಯದಲ್ಲಿ ಎಸ್.ಬಿ.ಎ.ಎಲ್ ಬಂದೂಕೊಂದು ಪತ್ತೆಯಾಗಿದ್ದು, ಇದು ಶರಣಾಗತ ನಕ್ಸಲ್ ರವೀಂದ್ರನಿಗೆ ಸೇರಿದ ಬಂದೂಕು ಎನ್ನಲಾಗಿದೆ.
ಮಣ್ಣಿನಡಿಯಲ್ಲಿ ಹೂತಿಟ್ಟಿದ್ದ ಬಂದೂಕು ಹಾಗೂ ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂದೂಕು ಹಾಗೂ ಜೀವಂತ ಗುಂಡುಗಳು ಅಪರಿಚಿತರದ್ದು ಎಂದು ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರು ನಕ್ಸಲರು ಶರಣಾದಾಗ ಸಿಕ್ಕ ಬಂದೂಕಿಗಳಿಗೂ ಪೊಲೀಸರು ಅಪರಿಚಿತರದ್ದು ಎಂದು ಹಣೆಪಟ್ಟಿ ಕಟ್ಟಿದ್ದರು. ಶರಣಾದ ನಕ್ಸಲರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸಲು ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ರಾಜ್ಯದಲ್ಲಿ ಕೊನೆಯ ನಕ್ಸಲ್ ಎನಿಸಿಕೊಂಡಿದ್ದ ರವೀಂದ್ರ ಫೆ.1ರಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಶರಣಾಗಿದ್ದ. ಈ ಮೂಲಕ ಕರ್ನಾಟಕದಲ್ಲಿ ನಕ್ಸಲರ ಯುಗಾಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.