ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರು ಊರುಗಳನ್ನೇ ತೊರೆಯುತ್ತಿದ್ದಾರೆ. ಫೈನಾನ್ಸ್ ಹಾವಳಿಗೆ ಅಂಕುಶ ಹಾಕಲು ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ. ಇತ್ತೀಚೆಗೆ ಸುಗ್ರೀವಾಜ್ಞೆ ಡ್ರಾಫ್ಟ್ ಅನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿತ್ತು. ಇದೀಗ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಲಾಗಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿ ವಿಚಾರವಾಗಿ ಸದ್ಯ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಿದೆ. ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ದಬ್ಬಾಳಿಕೆ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ 2025 ಎಂದು ಕೆಲ ಅಂಶ ಬದಲಾವಣೆ ಮಾಡಲಾಗಿದೆ. ಮೈಕ್ರೋ ಫೈನಾನ್ಸ್ ಪದ ಬಳಸಿದರೆ ಸಮಸ್ಯೆ ಆಗಬಹುದೆಂಬ ಲೆಕ್ಕಾಚಾರ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮೈಕ್ರೋ ಫೈನಾನ್ಸ್ಗಳು ಆರ್ಬಿಐ ಅಡಿಯಲ್ಲಿ ನೋಂದಣಿ ಆಗಿರುತ್ತವೆ. ಜೊತೆಗೆ ಕಾನೂನು ಕ್ರಮ ಜರುಗಿಸುವುದಕ್ಕೆ ಕಷ್ಟವಾಗುತ್ತೆ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಸಣ್ಣ ಸಾಲ ಎಂಬ ಪದ ಸೇರಿಸಿದೆ.
ಸರ್ಕಾರ ಸಾಲಗಾರನ ರಕ್ಷಣೆಗಾಗಿ ಸುಗ್ರೀವಾಜ್ಞೆಯ ರಕ್ಷಾ ಕವಚ ರಚನೆ ಮಾಡಿದೆ. ಬಡ್ಡಿ ದಂಧೆ, ಫೈನಾನ್ಸ್ ಸಿಬ್ಬಂದಿಯನ್ನ ಕಟ್ಟಿಹಾಕಲು ಕಠಿಣ ಕಾನೂನುಗಳನ್ನೇ ಅಳವಡಿಸಿ ಸುಗ್ರೀವಾಜ್ಞೆಯನ್ನ ರಾಜ್ಯಪಾಲರ ಅಂಗಳಕ್ಕೆ ಕಳಿಸಿಕೊಟ್ಟಿದೆ. ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿಯೊಂದೇ ಬಾಕಿ ಇದೆ.
ಪ್ರಸ್ತಾವಿತ ಸುಗ್ರೀವಾಜ್ಞೆಯಲ್ಲಿ ಮೈಕ್ರೋ ಫೈನಾನ್ಸ್ ಕಾನೂನು ಉಲ್ಲಂಘನೆಗೆ ಜೈಲು ಶಿಕ್ಷೆಯನ್ನು 3 ವರ್ಷ ಇದ್ದದ್ದನ್ನು 10 ವರ್ಷಕ್ಕೆ ಹೆಚ್ಚಿಸಲಾಗಿದೆ. ದಂಡವನ್ನು 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಕ್ಷೆ ಪ್ರಮಾಣ ಹೆಚ್ಚಿಸಲು ಶಿಫಾರಸು ಮಾಡಿದ್ದು, ಕಠಿಣ ಕ್ರಮದ ನಿರೀಕ್ಷೆ ಹೆಚ್ಚಾಗಿದೆ.
ಷರತ್ತುಗಳು ಮೀರಿದರೆ ಏನಾಗುತ್ತೆ?
ಸುಗ್ರೀವಾಜ್ಞೆಯ ಕಾನೂನು ಮೀರಿದರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ ವಿಧಿಸಲಾಗುತ್ತೆ. ನೋಂದಣಿ ಆಗದ ಸಂಸ್ಥೆಗಳು ನೀಡುವ ಸಾಲ ಮತ್ತು ಬಡ್ಡಿ ಮನ್ನಾ ಆಗಲಿದೆ. ಸಾಲಗಾರರ ವಿರುದ್ಧ ಯಾವುದೇ ಸಿವಿಲ್ ಕೋರ್ಟ್ನಲ್ಲಿ ಕೇಸ್ ದಾಖಲಿಸಬಹುದು. ಕಿರುಕುಳ ಸಂಬಂಧ ಪೊಲೀಸ್ ಠಾಣೆಗೆ ದೂರುಕೊಡ್ಬೋದು. DYSP ಶ್ರೇಣಿಗಿಂತ ಮೇಲಿನ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬಹುದು. ವಿವಾದಗಳನ್ನು ಇತ್ಯರ್ಥಪಡಿಸಲು ಒಂಬುಡ್ಸ್ಮೆನ್ ನೇಮಕಕ್ಕೂ ಅವಕಾಶ ನೀಡಲಾಗಿದೆ.