ಪುತ್ತೂರು: ಬ್ರಹ್ಮಾಂಡದ ಅಚಿಂತ್ಯ ಶಕ್ತಿಗಳ ಪ್ರಮುಖ ಸಂಚಾಲಕನಾಗಿ ಇಡೀ ವಿಶ್ವವನ್ನೇ ಮುನ್ನಡೆಸುವವ ಸೂರ್ಯ ದೇವರು. ಸಂಕ್ರಮಣ ಎಂದರೆ ಸೂರ್ಯ ದೇವರ ಹಬ್ಬ. ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಪ್ರವೇಶಿಸುವ ಅಥವಾ ಹೆಜ್ಜೆ ಇಡುವ ಶುಭಾವಸರಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ವೀಣಾ ಹೇಳಿದರು.
ಅವರು ನರೇಂದ್ರ ಪ ಪೂ ಕಾಲೇಜಿನಲ್ಲಿ ಶನಿವಾರ ನಡೆದ ಮಕರ ಸಂಕ್ರಾಂತಿಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಕ್ರಮಣ ಕಾಲದಲ್ಲಿ ಸೂರ್ಯ ದೇವರು ತನ್ನ ಪಥವನ್ನು ಉತ್ತರ ದಿಕ್ಕಿಗೆ ಬದಲಿಸುತ್ತಾರೆ. ಮಕರ ಸಂಕ್ರಾಂತಿ ಉತ್ತರಾಯಣವನ್ನು ಸೂಚಿಸುವುದು. ಈ ಮಕರ ಸಂಕ್ರಾಂತಿಯ ಪರ್ವಕಾಲದ ಉತ್ತರಾಯಣ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆಯುವುದು ವಿಶೇಷ. ಹಾಗಾಗಿ ಮಾನವರು ತಮ್ಮ ಬದುಕನ್ನು ಸುಂದರಗೊಳಿಸಿಕೊಂಡು ಭಗವಂತನಲ್ಲಿ ಲೀನಗೊಳಿಸಲು ಇದು ಸರ್ವ ಶ್ರೇಷ್ಠ ಕಾಲವಾಗಿದೆ ಎಂದ ಅವರು, ಈ ಹಬ್ಬದ ಆಚರಣೆ ಕೇವಲ ನಂಬಿಕೆಗೆ ಸೀಮಿತವಾಗಿರದೆ ಆಧ್ಯಾತ್ಮಿಕ, ನೈಸರ್ಗಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದೆ. ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ಆಶಯದೊಂದಿಗೆ ಎಳ್ಳು ಬೆಲ್ಲದ ಸವಿರುಚಿ ನಮ್ಮ ಜೀವನದುದ್ದಕ್ಕೂ ಮೇಳೈಸಲಿ ಎಂಬ ಉದಾತ್ತ ಚಿಂತನೆ ಈ ಹಬ್ಬದ ಆಚರಣೆ ಹಿಂದಿದೆ ಎಂದರು. ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಉಪನ್ಯಾಸಕಿ ರೇಣುಕಾ ಸ್ವಾಗತಿಸಿ. ವಂದಿಸಿದರು.