ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ತ್ರೀನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ನಿತೀನ್ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷತೆಗಾಗಿ ನಿತಿನ್ ಪಕ್ಕಳ ಅವರನ್ನು ಸದಸ್ಯ ನಿತಿನ್ ಮಂಗಳ ಸೂಚಿಸಿದರು. ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅನುಮೋದಿಸಿದರು. ಉಪಾಧ್ಯಕ್ಷತೆಗಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವರನ್ನು ನಿತಿನ್ ಮಂಗಳ ಸೂಚಿಸಿದರು. ಪ್ರಜ್ವಲ್ ಕೆ.ಆರ್. ಅನುಮೋದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿತಿನ್ ಪಕ್ಕಳ, ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಮುಂದೆ ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತೀ ತಿಂಗಳ ಸಭೆಯಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಿದರು.
ಉಪಾಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ಈ ವರೆಗೆ ಸಂಘ ಲಾಭದಾಯಕವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ಸಂಘಕ್ಕೆ ತನ್ನದೇ ಆದ ಚೌಕಟ್ಟು, ಧ್ಯೇಯೋದ್ದೇಶ ಇರುವುದು ಕಾರಣವಾಗಿದೆ. ಇದು ಚಾರಿಟಿಯಾಗಿ ಬೆಳೆದ ಸಂಸ್ಥೆಯಾಗಿದೆ. ಮುಂದಿನ ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಕೋರಿದರು.
ಉಳಿದಂತೆ ಸಂಘದ ಸದಸ್ಯರಾಗಿ ಕಿಶೋರ್ ಕುಮಾರ್ ಬಿ.ಆರ್., ಪ್ರಸೀದ ಕೃಷ್ಣ ಕಲ್ಲೂರಾಯ, ಶ್ರೀಪಾದ, ಯತೀಶ್, ಪ್ರಸಾದ್ ಕೆ.ಎನ್., ನಿತಿನ್ ಕುಮಾರ್ ಕೆ., ಪ್ರಜ್ವಲ್ ಕೆ.ಆರ್., ಹಿತೈಷಿ ಪಕ್ಕಳ, ಅನುಪಮ ಇದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಾಧಿಕಾರದಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಚುನಾವಣಾಧಿಕಾರಿಯಾಗಿ ನವೀನ್ ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ನವೀನ್ ಚಂದ್ರ ಸಹಕರಿಸಿದರು.