ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಶನಿವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 3 ಕ್ಕೆ ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಜೆ 6 ರಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ ಊರವರಿಂದ ಭಜನೆ ನಡೆದು, ಬಳಿಕ ರಾತ್ರಿ 8ಕ್ಕೆ ಮಹಾಪೂಜೆ ಜರಗಿತು.

ಶನಿವಾರ ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ದೇವರಿಗೆ ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶೀಯ ಮೊಕ್ತೇಸರರಾದ ಹರೀಶ್ ಆಚಾರ್ ನಗ್ರಿಗುತ್ತು, ಪ್ರವೀಣ್ ಕುಮಾರ್ ಕೆಜೆಂಜಿಗುತ್ತು, ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಪ್ರಧಾನ ಕಾರ್ಯದರ್ಶಿ ಬಿ.ಶೂರಪ್ಪ ಗೌಡ, ಜತೆ ಕಾರ್ಯದರ್ಶಿ ಪದ್ಮನಾಭ ದೋಳ, ಸದಸ್ಯರಾದ ಎನ್.ಮಹಾಲಿಂಗೇಶ್ವರ ಶರ್ಮ ಕಜೆ, ಕೆ.ಸೀತಾರಾಮ ರೈ ಸವಣೂರು, ಎನ್.ಬಾಲಕೃಷ್ಣ ಗೌಡ ನೂಜಿ, ಶುಭಾ ಆರ್. ನೋಂಡಾ ಬರೆಪ್ಪಾಡಿ, ನಿಟ್ಟೋಣಿ ಕೆ., ಪ್ರಧಾನ ಅರ್ಚಕ ಟಿ.ರಾಮನಂದ ಭಟ್, ಊರ ಭಕ್ತಾದಿಗಳು ಉಪಸ್ಥಿತರಿದ್ದರು.